ಸ್ವಚ್ಛತೆ, ಗುಣಗಳು, ಆಚಾರ ವಿಚಾರಗಳು, ಒಂದು ಜಾತಿಯ ಸ್ವತ್ತಲ್ಲ. ರಾಘವಾಂಕನ ಹರಿಶ್ಚಂದ್ರ ಕಾವ್ಯದಲ್ಲಿ ಶಿವ `ಅತಿ ಹುಸಿವ ಯತಿ ಹೊಲೆಯ, ಹುಸಿಯದಿಹ ಹೊಲೆಯ ಉನ್ನತ ಯತಿವರನು' ಎಂದು ಹೇಳುತ್ತಾನೆ. ಅದರಿಂದ ಜಾತಿ ಹುಟ್ಟಿನಿಂದ ಬರುವಂಥದಲ್ಲ ಎಂದು ಸಾಧಿತವಾಗುತ್ತದೆ. ತುಳಿತಕ್ಕೊಳಗಾದವರಿಗೆ, ಶೋಷಣೆಯಿಂದ ಬಲಹೀನರಾದವರಿಗೆ, ಸಾಮಾಜಿಕ ನ್ಯಾಯವನ್ನು ಖಾತರಿ ಪಡಿಸಿಕೊಳ್ಳಲು ಶಿಕ್ಷಣದಲ್ಲಿ ಮತ್ತು ಸರ್ಕಾರಿ ನೌಕರಿಯಲ್ಲಿ ಜಾತಿ ಕೇಳಲಾಗುತ್ತದೆಯೇ ಹೊರತು, ಜಾತಿಯನ್ನು ಉಳಿಸಿಕೊಂಡು ಹೋಗುವ ಉದ್ದೇಶದಿಂದಲ್ಲ.