ಕೂಡ್ಲಿಗಿ: ಎಲ್ಲ ನಾಗರಿಕರಿಗೆ ಬ್ಯಾಂಕ್ ಖಾತೆ, ಎಲ್ಲ ಗ್ರಾಮಗಳಿಗೆ ಬ್ಯಾಂಕಿಂಗ್ ಸೇವೆ ಎಂಬ ಭಾರತ ಸರ್ಕಾರದ ಯೋಜನೆ ಹಾಗೂ ರಿಸರ್ವ ಬ್ಯಾಂಕ್ ಅರ್ಥಿಕ ಸೇರ್ಪಡೆ ಕಾರ್ಯಕ್ರಮದಡಿ ಪ್ರಗತಿ ಗ್ರಾಮೀಣ ಬ್ಯಾಂಕ್ ಇತ್ತೀಚೆಗೆ ತಾಲ್ಲೂಕಿನ ಕುಪ್ಪಿನಕೇರಿ, ಶಿವಪುರ ಗ್ರಾಮಗಳಲ್ಲಿ ಸ್ವಾಭಿಮಾನ್ ಯೋಜನೆ ಕಾರ್ಯಕ್ರಮವನ್ನು ಏರ್ಪಡಿಸಿತ್ತು.
ಬ್ಯಾಂಕಿನ ಜೆ.ಸತ್ಯಪ್ಪ, ಮನುಷ್ಯನ ದೇಹಕ್ಕೆ ರಕ್ತ ಎಷ್ಟು ಅವಶ್ಯಕವೋ ಹಾಗೆ ಇಂದಿನ ನಾಗರಿಕ ಜೀವನದಲ್ಲಿ ಬ್ಯಾಂಕುಗಳು ಅಗತ್ಯವಾಗಿದೆ ಎಂದರು.
ಸ್ವಾಭಿಮಾನ್ ಯೋಜನೆಯಲ್ಲಿ ಗ್ರಾಮೀಣ ಭಾಗದ ಪ್ರತಿಯೊಬ್ಬರಿಗೂ ಬ್ಯಾಂಕ್ ಸೌಲಭ್ಯ ದೊರೆಯಬೇಕೆಂಬ ಕಾರಣದಿಂದ ಶೂನ್ಯ ಖಾತೆಗಳನ್ನು ತೆರೆಯುವುದು, ಖಾತೆದಾರರಿಗೆ ಬ್ಯಾಂಕ್ ನಡತೆ, ವ್ಯವಹರಿಸಲು ಸ್ಮಾರ್ಟ ಕಾರ್ಡ ನೀಡುವುದರ ಮೂಲಕ ಆರ್ಥಿಕವಾಗಿ ಸಬಲರಾಗಲು ಅವಕಾಶ ಕಲ್ಪಿಸಲಾಗಿದೆ ಎಂದರು. ಇದೇ ಸಂದರ್ಭದಲ್ಲಿ ಬಳ್ಳಾರಿ ರಂಗಜಂಗಮ ಕಲಾ ತಂಡದಿಂದ ಬೀದಿ ನಾಟಕವನ್ನೂ ಪ್ರದರ್ಶಿಸಲಾಯಿತು.