ಕಳಸ: ಮುಂದಿನ ತಿಂಗಳು ನಡೆಯಲಿರುವ ಉಡುಪಿ-ಚಿಕ್ಕಮಗಳೂರು ಲೋಕಸಭಾ ಉಪ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ಜಯಪ್ರಕಾಶ ಹೆಗ್ಡೆ ಪಟ್ಟಣದಲ್ಲಿ ಶುಕ್ರವಾರ ಚುನಾವಣಾ ಪ್ರಚಾರ ಪ್ರಾರಂಭ ಮಾಡಿದರು.
ಕಳಸದ ಕಳಸೇಶ್ವರ ಸ್ವಾಮಿ ಮತ್ತು ಹೊರನಾಡಿನ ಅನ್ನಪೂರ್ಣೇಶ್ವರಿ ಸನ್ನಿಧಿಯಲ್ಲಿ ವಿಶೇಷ ಪೂಜೆ ಸಲ್ಲಿಸಲು ಕುಟುಂಬದೊಂದಿಗೆ ಅವರು ಬಂದಿದ್ದರು. ರೋಟರಿ ಸಭಾಂಗಣದಲ್ಲಿ ನೆರೆದಿದ್ದ ಕಾರ್ಯಕರ್ತರೊಂದಿಗೆ ಮಾತನಾಡಿದ ಜಯಪ್ರಕಾಶ ಹೆಗ್ಡೆ, ನನ್ನನ್ನು ಲೋಕಸಭೆಗೆ ಕಳಿಸಿ ನೋಡಿ ಎಂದರು.
ಕಳೆದ ಚುನಾವಣೆ ಸಂದರ್ಭದ ಪ್ರಚಾರದಲ್ಲಿ ಆದ ವಿಳಂಬ ಮತ್ತು ಸಂಪನ್ಮೂಲದ ಕೊರತೆ ಸೋಲನ್ನು ತಂದಿತ್ತು. ಈ ಬಾರಿ ಮಲೆನಾಡಿನ ಜತೆಗೆ ಕರಾವಳಿಯಲ್ಲೂ ವಿಶೇಷ ಗಮನ ನೀಡುತ್ತಿದ್ದು ಗೆಲ್ಲುವ ವಿಶ್ವಾಸ ಇದೆ ಎಂದರು.
ಮುಂದಿನ ದಿನಗಳಲ್ಲಿ ಕ್ಷೇತ್ರದಾದ್ಯಂತ ವಿಶೇಷ ಸಭೆಗಳನ್ನು ನಡೆಸಲಾಗುತ್ತದೆ. ಎಲ್ಲ ವಿಧಾನ ಸಭಾ ಕ್ಷೇತ್ರಗಳಲ್ಲೂ ನಡೆಯುವ ಸಭೆಗಳಲ್ಲಿ ಕೇಂದ್ರ ಸಚಿವರಾದ ಎಸ್.ಎಂ.ಕೃಷ್ಣ, ಮಲ್ಲಿ ಕಾರ್ಜುನ ಖರ್ಗೆ, ವೀರಪ್ಪ ಮೊಯ್ಲಿ, ಮುನಿ ಯಪ್ಪ ಅವರ ಜೊತೆಗೆ ಹಿರಿಯ ಮುಖಂಡರಾದ ಜನಾರ್ದನ ಪೂಜಾರಿ, ಆಸ್ಕರ್ ಫರ್ನಾಡಿಂಸ್ ಭಾಗವ ಹಿಸಲಿದ್ದಾರೆ ಎಂದು ಹೆಗ್ಡೆ ಪ್ರಚಾರದ ರೂಪುರೇಷೆ ವಿವರಿಸಿದರು.
ಕಳೆದ ಚುನಾವಣೆ ಸೋತ ನಂತರವೂ 2 ವರ್ಷದಿಂದ ಕ್ಷೇತ್ರದಾದ್ಯಂತ ವಿಶೇಷ ಪ್ರವಾಸಗಳನ್ನು ಮಾಡಿ ಇಲ್ಲಿನ ಸಮಸ್ಯೆಗಳ ಬಗ್ಗೆ ಅರಿ ತಿದ್ದೇನೆ. ಕುಟುಂಬದ ಯಾವುದೇ ಸದಸ್ಯ ತಮ್ಮ ವಿಚಾರದಲ್ಲಿ ಹಸ್ತಕ್ಷೇಪ ಮಾಡದಂತೆ ಎಚ್ಚರ ವಹಿಸಿ ಶುದ್ಧಹಸ್ತನಾಗಿ ಉಳಿದಿದ್ದೇನೆ.
ಈ ಬಾರಿ ಪೂರ್ಣ ಪ್ರಮಾಣದ ಹೋರಾಟ ಶತಸ್ಸಿದ್ಧ ಎಂದು ಹೆಗ್ಡೆ ತುರುಸಿನ ಪೈಪೋಟಿಯ ಸೂಚನೆ ನೀಡಿದರು. ಉಡುಪಿಯ ಪದ್ಮಪ್ರಿಯಾ ಕೊಲೆ ಪ್ರಕರಣದಲ್ಲಿ ಶಾಸಕ ರಘುಪತಿ ಭಟ್ ಜತೆಗೆ ಸುನೀಲ್ ಕುಮಾರ್ ಕೂಡ ಆರೋಪಿ ಯಾಗಿದ್ದಾರೆ. ಇಂತಹ ವರನ್ನು ಬಿಜೆಪಿ ಸಂಸತ್ ಚುನಾವಣೆಗೆ ನಿಲ್ಲಿಸಿದೆ. ಕಾನೂನು ಮಾಡಬೇಕಾದ ಶಾಸಕರೇ ವಿಧಾನಸೌಧದಲ್ಲಿ ಕಾನೂನು ಬಾಹಿರ ಚಟುವಟಿಕೆಯಲ್ಲಿ ತೊಡಗಿರುವಾಗ ಬಿಜೆಪಿಯ ಜನಪ್ರತಿನಿಧಿಗಳಿಂದ ಜನರು ಏನನ್ನೂ ನಿರೀಕ್ಷಿಸುವ ಹಾಗಿಲ್ಲ ಎಂದು ಹೆಗಡೆ ವಿಷಾದ ವ್ಯಕ್ತಪಡಿಸಿದರು.
ಇದಕ್ಕೂ ಮುನ್ನ ಮಾತನಾಡಿದ ಕಾಂಗ್ರೆಸ್ ಮುಖಂಡ ಬಿ.ಎಲ್.ರಾಮದಾಸ್, ಜಯ ಪ್ರಕಾಶ್ ಹೆಗ್ಡೆ ಸಂಸದನಾಗಿ ಆಯ್ಕೆಯಾಗ ಬೇಕಾದ ಎಲ್ಲ ಅರ್ಹತೆ ಇರುವ ಯೋಗ್ಯ ಅಭ್ಯರ್ಥಿ. ಅವರ ವ್ಯಕ್ತಿತ್ವ ನೋಡಿ ಮತ ಹಾಕಿದರೆ ಖಂಡಿತವಾಗಿಯೂ ಜನರ ನಂಬಿಕೆಗೆ ಮೋಸ ಆಗುವುದಿಲ್ಲ ಎಂದರು.
ಪಕ್ಷದ ಮುಖಂಡರಾದ ನಿಖಿಲ್ ಉಮೇಶ್, ಹರ್ಷ, ಶ್ರೆನಿವಾಸ್, ಚನ್ನಕೇಶವ, ಮಾರ್ಟಿನ್ ಡಿಸೋಜ, ವರ್ಧಮಾನಯ್ಯ, ಮಹೇಂದ್ರ, ದೇವ ದಾಸ್, ಪ್ರಭಾಕರ್ ಇದ್ದರು.ಚಿಕ್ಕಮಗಳೂರಿನಲ್ಲಿ ಪ್ರಚಾರ: ಚಿಕ್ಕಮಗಳೂರಿನ ಗಣಪತಿ ದೇವಸ್ಥಾನ, ವಿವಿಧ ಚರ್ಚ್ ಹಾಗೂ ಮಸೀದಿಗಳಿಗೆ ಭೇಟಿ ನೀಡಿದ ಜಯಪ್ರಕಾಶ ಹೆಗ್ಡೆ ಪ್ರಚಾರ ಕಾರ್ಯ ಆರಂಭಿಸಿದರು. ಪಕ್ಷದ ಪ್ರಮು ಖರು, ಕಾರ್ಯಕರ್ತರು ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.