ಹೊಸದುರ್ಗ: ಪ್ರಸ್ತುತದಲ್ಲಿ ದೇಶ ಅಭಿವೃದ್ಧಿ ಆಗಬೇಕಾದರೆ ಮತ ಪ್ರಚಾರರಹಿತ ಚುನಾವಣೆ ನಡೆಸುವುದು ಅಗತ್ಯ ಎಂದು ಕುವೆಂಪು ವಿವಿ ವಿಶ್ರಾಂತ ಕನ್ನಡ ಪ್ರಾಧ್ಯಾಪಕ ಪ್ರೊ.ಶ್ರೀಕಂಠ ಕೂಡಿಗೆ ತಿಳಿಸಿದರು.
ಮಂಗಳವಾರ ಪಟ್ಟಣದ ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಆಯೋಜಿಸಿದ್ದ ಸಾಂಸ್ಕೃತಿಕ, ಕ್ರೀಡಾ ಮತ್ತು ರಾಷ್ಟ್ರೀಯ ಸೇವಾ ಯೋಜನೆ ಚಟುವಟಿಕೆಗಳ ಸಮಾರೋಪ ಮತ್ತು ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಅವರು ಮಾತನಾಡಿದರು.
ಅನಾಚಾರದ ರಾಜಕೀಯ ಆಡಳಿತದಿಂದ ಬಡ ವಿದ್ಯಾರ್ಥಿಗಳ ವಿದ್ಯಾಭ್ಯಾಸದ ಮೇಲೆ ಸಾಕಷ್ಟು ಕೆಟ್ಟ ಪರಿಣಾಮಗಳು ಉಂಟಾಗುತ್ತಿವೆ. ಇಂತಹ ವ್ಯವಸ್ಥೆ ಬದಲಾಗಬೇಕಾದರೆ ಇಡೀ ಚುನಾವಣೆಯ ರೂಪುರೇಷೆ ಬದಲಾಗಬೇಕು ಎಂದರು. ಪ್ರಾಂಶುಪಾಲ ಪ್ರೊ.ಕೆ.ಬಿ. ವೆಂಕಟರಮಣ ರೆಡ್ಡಿ ಮಾತನಾಡಿದರು.
ಸಹಪ್ರಾಧ್ಯಾಪಕ ಪ್ರೊ.ಜಿ.ಸಿ. ಮೂರ್ತಿ ಮತ್ತು ಡಿ.ಆರ್. ಹನುಮಂತರಾಯ್ ಮಾತನಾಡಿದರು.
ಪ್ರತಿಭಾ ಪುರಸ್ಕಾರ ವಿತರಣೆ ಜವಾಬ್ದಾರಿ ಕಾರ್ಯವನ್ನು ಉಪನ್ಯಾಸಕರಾದ ಎ. ಮೋಹನ್, ಎಂ.ವಿ. ನಾಗರಾಜ್ ನಿರ್ವಹಿಸಿದರು.
ಸಮಾರಂಭದಲ್ಲಿ 2012-13ನೇ ಸಾಲಿನ ಸಾಂಸ್ಕೃತಿಕ ಹಾಗೂ ಕ್ರೀಡಾ ಕ್ಷೇತ್ರದಲ್ಲಿ ವಿಶೇಷ ಸಾಧನೆ ಮಾಡಿದ ಅನೇಕ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಗಿತ್ತು. ಕನ್ನಡ ವಿಭಾಗದ ಮುಖ್ಯಸ್ಥ ಕೆ. ಭೈರಪ್ಪ ಕಾರ್ಯಕ್ರಮ ನಿರೂಪಿಸಿದರು.ಕೆ.ಎಸ್. ಸವಿತಾ ಸ್ವಾಗತಿಸಿದರು. ಅಫ್ರಿನಾ ಕೌಸರ್ ಪ್ರಾರ್ಥಿಸಿದರು.