ಗುಲ್ಬರ್ಗ: `ಸತ್ಯಾಗ್ರಹ ನಡೆಸುತ್ತಿದ್ದ ಬಾಬಾ ರಾಮ್ದೇವ್ರನ್ನು ಮಧ್ಯರಾತ್ರಿ ಬಂಧಿಸಿದ ಕ್ರಮ ಪ್ರಜಾಪ್ರಭುತ್ವದ ಮೇಲೆ ನಡೆಸಿದ ದಾಳಿ` ಎಂದು ಕಾಂಗ್ರೆಸ್ ನಾಯಕ ಹಾಗೂ ಮಾಜಿ ಶಾಸಕ ಬಿ.ಆರ್.ಪಾಟೀಲ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕಾನೂನಿನ ಅಡಿಯಲ್ಲಿ ಶಾಂತಿಯುತವಾಗಿಯೇ ಸತ್ಯಾಗ್ರಹ ನಡೆಸುತ್ತಿದ್ದ ರಾಮ್ದೇವ್ ಅವರನ್ನು ರಾತ್ರಿ 1 ಗಂಟೆ ಸುಮಾರಿಗೆ ಬಂಧಿಸಿದ ಪೊಲೀಸರ ಕಾರ್ಯವೈಖರಿ ಸರಿಯಲ್ಲ ಎಂದು ಅವರು ಸೋಮವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
`ಭ್ರಷ್ಟಾಚಾರ ನಿರ್ಮೂಲನೆಗೆ ಆಗ್ರಹಿಸಿ ಜೂನ್ 4ರಂದು ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳುವುದಾಗಿ ಬಾಬಾ ಮೊದಲೇ ಘೋಷಿಸಿದ್ದರು. ಇದರಲ್ಲಿ ಮುಚ್ಚಿಡುವಂಥದ್ದು ಏನೂ ಇರಲಿಲ್ಲ. ಈ ಮಧ್ಯೆ ಕೇಂದ್ರದ ನಾಲ್ವರು ಹಿರಿಯ ಸಚಿವರು ರಾಮ್ದೇವ್ ಮನವೊಲಿಕೆಗೆ ಯತ್ನ ನಡೆಸಿದರು. ಕೇಂದ್ರ ಸರ್ಕಾರ, ಈಗ ರಾಮ್ದೇವ್ ಅವರ ವಿರುದ್ಧ ನಿಂದನೆ ಮಾಡುತ್ತಲೇ ವಂಚಕ- ಕಳ್ಳ ಎಂಬೆಲ್ಲ ಭಾಷೆ ಬಳಸಿರುವುದು ಸಾಧುವಲ್ಲ~ ಎಂದ ಅವರು, ಈ ಪ್ರಕರಣವನ್ನು ಯುಪಿಎ ಸರ್ಕಾರ ಸರಿಯಾದ ರೀತಿಯಲ್ಲಿ ನಿರ್ವಹಿಸಲಿಲ್ಲ ಎಂದರು.
ಭ್ರಷ್ಟಾಚಾರ ಜ್ವಲಂತ ಸಮಸ್ಯೆಯಾಗಿದ್ದು, ಕೇಂದ್ರ ಸರ್ಕಾರ ಈ ಬಗ್ಗೆ ಗಂಭೀರ ಕಳವಳ ವ್ಯಕ್ತಪಡಿಸಿದೆ. ಅಣ್ಣಾ ಹಜಾರೆ ಬಳಿಕ ರಾಮ್ದೇವ್ ಈಗ ಇದರ ವಿರುದ್ಧ ಹೋರಾಟ ಆರಂಭಿಸಿದ್ದಾರೆ. ಕಾನೂನಿನ ಅಡಿಯಲ್ಲಿ ಹೋರಾಟ ಆರಂಭಿಸಿದ ರಾಮ್ದೇವ್ರನ್ನು ಬಂಧಿಸಿದ ವಿಧಾನ ಮಾತ್ರ ಪ್ರಜಾತಂತ್ರದ ಮೇಲೆ ನಡೆಸಿದ ದಾಳಿ ಎಂದು ಅವರು ವ್ಯಾಖ್ಯಾನಿಸಿದರು.
ಬಹಿಷ್ಕಾರ ಸಲ್ಲದು: ವಿಧಾನಮಂಡಲದ ಅಧಿವೇಶನಕ್ಕೆ ಕಾಂಗ್ರೆಸ್ ಬಹಿಷ್ಕಾರ ಹಾಕುವುದು ಸರಿಯಲ್ಲ. ಪ್ರಜಾಪ್ರಭುತ್ವದಲ್ಲಿ ಭಿನ್ನಾಭಿಪ್ರಾಯ ಇರಬೇಕು; ಆದರೆ ಶಾಸಕರು ಚರ್ಚೆಯಲ್ಲಿ ಪಾಲ್ಗೊಳ್ಳಬೇಕು ಎಂಬುದು ತಮ್ಮ ಅಭಿಪ್ರಾಯ ಎಂದರು.