ನವದೆಹಲಿ(ಪಿಟಿಐ): `ಹಣಕಾಸು ಸಚಿವಾಲಯದಿಂದ ನಿರ್ಗಮಿಸುವುದಕ್ಕೂ ಮುನ್ನ ಮುಂದೆ ಎದುರಾಗಲಿರುವ ತೆರಿಗೆ ವ್ಯತ್ಯಯದ `ಪರಿಹಾರ~ ಸಮಸ್ಯೆಯನ್ನು ಬಗೆಹರಿಸಿಕೊಟ್ಟುಬಿಡಿ~ ಎಂದು ರಾಜ್ಯ ಸರ್ಕಾರಗಳು ಕೇಂದ್ರ ಹಣಕಾಸು ಸಚಿವ ಪ್ರಣವ್ ಮುಖರ್ಜಿ ಅವರನ್ನು ಮನವಿ ಮಾಡಿವೆ.
ಸರಕು ಮತ್ತು ಸೇವೆಗಳ ತೆರಿಗೆ(ಜಿಎಸ್ಟಿ) ನೀತಿ ಜಾರಿಗೆ ಬಂದ ನಂತರ ಕೇಂದ್ರ ಮಾರಾಟ ತೆರಿಗೆಯಲ್ಲಿ ಕಡಿತವಾಗಿ ರಾಜ್ಯದ ಪಾಲಿನ ಪ್ರಮಾಣದಲ್ಲಿ ವ್ಯತ್ಯಯವಾಗಲಿದ್ದು, ಇದಕ್ಕೆ ಸಂಬಂಧಿಸಿದ `ಪರಿಹಾರ~ ಸೂತ್ರವನ್ನು ಮೊದಲೇ ರಚಿಸಿಬಿಡಿ ಎಂಬುದು ವಿವಿಧ ರಾಜ್ಯ ಸರ್ಕಾರಗಳ ಬೇಡಿಕೆಯಾಗಿದೆ.
ಈ ಸಂಬಂಧ ಎಲ್ಲ ರಾಜ್ಯಗಳ ಹಣಕಾಸು ಸಚಿವರ ಉನ್ನತ ಸಮಿತಿಯ ಅಧ್ಯಕ್ಷ ಸುಶೀಲ್ ಕುಮಾರ್ ಮೋದಿ ಅವರು ಪ್ರಣವ್ ಮುಖರ್ಜಿ ಅವರಿಗೆ ಪತ್ರ ಬರೆದಿದ್ದಾರೆ.
ಮುಖರ್ಜಿ ಅವರ ವಿಶೇಷ ಆಸಕ್ತಿಯ ಫಲವಾಗಿ ರೂಪುಗೊಂಡಿರುವ `ಜಿಎಸ್ಟಿ~ ಶೀಘ್ರದಲ್ಲೇ ಜಾರಿಗೆ ಬರಲಿದೆ. ಒಂದೊಮ್ಮೆ `ಕೇಂದ್ರ ವಾಣಿಜ್ಯ ತೆರಿಗೆ~(ಸಿಎಸ್ಟಿ)ಗೆ ಸಂಬಂಧಿಸಿದ ಪರಿಹಾರ ವಿಚಾರ ಬಗೆಹರಿಯದೇ ಇದ್ದಲ್ಲಿ `ಜಿಎಸ್ಟಿ~ ಜಾರಿಗೆ ತೊಡಕಾಗಲಿದೆ ಎಂದು ಸುಶೀಲ್ ಕುಮಾರ್ ಮೋದಿ ಸುದ್ದಿಸಂಸ್ಥೆಗೆ ಭಾನುವಾರ ಪ್ರತಿಕ್ರಿಯಿಸಿದರು.
2010-11ರಲ್ಲಿ ಕೇಂದ್ರದ ತೆರಿಗೆ ಬಾಬ್ತಿನಲ್ಲಿ ರಾಜ್ಯಗಳು ತಮ್ಮ ಪಾಲಿಗೆ ರೂ. 19000 ಕೋಟಿ ಬರಬೇಕೆಂದು ಬೇಡಿಕೆ ಸಲ್ಲಿಸಿದ್ದವು. ಆದರೆ, ಆ ವರ್ಷ ರಾಜ್ಯಗಳಿಗೆ ದೊರಕಿದ್ದು ರೂ. 6000 ಕೋಟಿ ಮಾತ್ರ. 2011-12ರಲ್ಲಿ ಅದೂ ಇಲ್ಲ ಎನ್ನುವಂತಹ ಸ್ಥಿತಿ. ಇದು ರಾಜ್ಯ ಸರ್ಕಾರಗಳನ್ನು ಕಂಗೆಡಿಸಿದೆ ಎಂದಿದ್ದಾರೆ ಮೋದಿ.