ನವದೆಹಲಿ (ಪಿಟಿಐ): ಪ್ರಣವ್ ಮುಖರ್ಜಿ ಲಾಭದ ಹುದ್ದೆ ಹೊಂದಿದ್ದಾರೆ ಎಂದು ಎನ್ಡಿಎ ರಾಷ್ಟ್ರಪತಿ ಅಭ್ಯರ್ಥಿ ಪಿ.ಎ.ಸಂಗ್ಮಾ ಅವರು ಮಾಡಿರುವ ಆರೋಪಗಳನ್ನು ಸರ್ಕಾರ ಅಲ್ಲಗಳೆದಿದೆ.
ರಾಷ್ಟ್ರಪತಿ ಚುನಾವಣೆಗೆ ನಾಮಪತ್ರ ಸಲ್ಲಿಸುವ ಒಂದು ವಾರ ಮೊದಲೇ ಪ್ರಣವ್ ಮುಖರ್ಜಿ ಭಾರತೀಯ ಸಾಂಖ್ಯಿಕ ಸಂಸ್ಥೆಯ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಆದ್ದರಿಂದ ಅವರು ಯಾವುದೇ ಲಾಭದಾಯಕ ಹುದ್ದೆ ಹೊಂದಿಲ್ಲ ಎಂದು ಸಂಸದೀಯ ವ್ಯವಹಾರ ಸಚಿವ ಪವನ್ ಕುಮಾರ್ ಬನ್ಸಲ್ ತಿಳಿಸಿದ್ದಾರೆ.
ಪ್ರಣವ್ ಲಾಭದ ಹುದ್ದೆ ಹೊಂದಿರುವ ಕಾರಣ ಅವರ ನಾಮಪತ್ರ ರದ್ದುಗೊಳಿಸಬೇಕು ಎಂದು ಸಂಗ್ಮಾ ಬಣ ಚುನಾವಣಾ ಆಯೋಗಕ್ಕೆ ಅರ್ಜಿ ಸಲ್ಲಿಸಿದ ಕೆಲ ನಿಮಿಷಗಳಲ್ಲೇ ಬನ್ಸಲ್ ಸುದ್ದಿಸಂಸ್ಥೆಗೆ ಈ ಸ್ಪಷ್ಟನೆ ನೀಡಿದ್ದಾರೆ.
ಮಂಗಳವಾರ ಪ್ರಣವ್ ಅವರು ಚುನಾವಣಾ ಅಧಿಕಾರಿಗೆ ತಮ್ಮ ಉತ್ತರ ಸಲ್ಲಿಸಲಿದ್ದಾರೆ ಎಂದೂ ಬನ್ಸಲ್ ತಿಳಿಸಿದ್ದಾರೆ. ಈ ಮಧ್ಯೆ ಭಾರತೀಯ ಸಾಂಖ್ಯಿಕ ಸಂಸ್ಥೆ, ಪ್ರಣವ್ ಮುಖರ್ಜಿ ಜೂನ್ 20ರಂದೇ ಸಂಸ್ಥೆಯ ಅಧ್ಯಕ್ಷರ ಹುದ್ದೆಗೆ ರಾಜೀನಾಮೆ ನೀಡಿದ್ದರು ಎಂದು ಸ್ಪಷ್ಟಪಡಿಸಿದೆ.