ನವದೆಹಲಿ: ಪ್ಯಾರಾಮೆಡಿಕಲ್ ವಿದ್ಯಾರ್ಥಿನಿ ಮೇಲಿನ ಸಾಮೂಹಿಕ ಅತ್ಯಾಚಾರ ಖಂಡಿಸಿ ಕೆಲವು ದಿನಗಳಿಂದ ರಾಜಧಾನಿಯಲ್ಲಿ ನಡೆಯುತ್ತಿರುವ ತೀವ್ರ ಪ್ರತಿಭಟನೆಗಳ ಹಿನ್ನೆಲೆಯಲ್ಲಿ ಮಂಗಳವಾರ ಕಾಂಗ್ರೆಸ್ ಪ್ರಮುಖರ ಸಭೆ (ಕೋರ್ ಕಮೀಟಿ) ನಡೆದಿದ್ದು ಪ್ರತಿಭಟನಾಕಾರರ ಜತೆ ದೆಹಲಿ ಪೋಲೀಸರು ಸಂಧಾನಪ್ರಕ್ರಿಯೆ ಕೈಗೊಳ್ಳಲು ಸಲಹೆ ನೀಡಿದ್ದಾರೆ.
ಪ್ರಧಾನಿ ನಿವಾಸದಲ್ಲಿ ಸುಮಾರು ಎರಡು ಗಂಟೆಗಳ ಕಾಲ ನಡೆದ ಸಭೆಯಲ್ಲಿ ರಾಜಧಾನಿಯ ಇತ್ತೀಚಿನ ಅಹಿತಕರ ವಿದ್ಯಮಾನಗಳ ಕುರಿತು ಪ್ರಮುಖರು ಚಿಂತನಮಂಥನ ನಡೆಸಿದ್ದು ಪ್ರತಿಭಟನೆಗಳು ಹಿಂಸೆಗೆ ತಿರುಗಬಾರದಿತ್ತು ಎಂದು ಅಭಿಪ್ರಾಯಪಟ್ಟರು.
ಅತ್ಯಾಚಾರ ಪ್ರಕರಣಗಳ ಕುರಿತು ರಚಿಸಲಾದ ಜೆ.ಎಸ್. ವರ್ಮಾ ನೇತೃತ್ವದ ಸಮಿತಿ ಈಗಾಗಲೇ ತನ್ನ ಕೆಲಸ ಆರಂಭಿಸಿದೆ ಎಂದು ಸಭೆಗೆ ಗೃಹ ಸಚಿವ ಸುಶೀಲ್ ಕುಮಾರ ಶಿಂಧೆ ತಿಳಿಸಿದರು.