ಚಿಕ್ಕಬಳ್ಳಾಪುರ: ಒಂದೆಡೆ ಭೂಕೈಲಾಸದ ರಾವಣ ಮತ್ತು ಕೈಲಾಸನಾಥ ಈಶ್ವರನ ಸಂಗಮವಿದ್ದರೆ; ಮತ್ತೊಂದೆಡೆ ತಕ್ಷಣಕ್ಕೆ ಸಿಗುವ ಪರಿಕರಗಳನ್ನೇ ಬಳಸಿ ದೇವರನ್ನು ತಲೆ ಮೇಲೆ ಹೊತ್ತು ಮಕ್ಕಳು ನರ್ತನ ಮಾಡುತ್ತಿದ್ದರು. ದಕ್ಷಿಣ ಕನ್ನಡ ಜಿಲ್ಲೆಯ ಪ್ರಸಿದ್ಧ ಭೂತಾರಾಧನೆ ಸೇರಿದಂತೆ ವಿವಿಧ ವೇಷಗಳನ್ನು ಧರಿಸಿದ್ದ ವಿದ್ಯಾರ್ಥಿಗಳು ತೀರ್ಪುಗಾರರ ಮೆಚ್ಚುಗೆಗೆ ಪಾತ್ರರಾದರು.'
ನಗರದ ಬಿ.ಬಿ.ರಸ್ತೆಯಲ್ಲಿರುವ ಸರ್ಕಾರಿ ಪ್ರೌಢಶಾಲೆಯಲ್ಲಿ ಶುಕ್ರವಾರ ನಡೆದ ತಾಲ್ಲೂಕು ಮಟ್ಟದ ಪ್ರತಿಭಾ ಕಾರಂಜಿ ಪ್ರಯುಕ್ತ ಶಾಲಾ ಆವರಣವೆಲ್ಲ ವಿದ್ಯಾರ್ಥಿಗಳ ಕಲರವದಿಂದ ಕೂಡಿತ್ತು. ‘ಖಾಸಗಿ ಶಾಲೆಗಳಿಗೆ ಪೈಪೋಟಿ ಕೊಡುವಂತೆ ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳು ಸಾಧನೆ ಮಾಡಬೇಕು. ಶಿಕ್ಷಕರು ಮಕ್ಕಳ ಪ್ರತಿಭೆಗಳು ಹೊರಹೊಮ್ಮಲು ಪ್ರೋತ್ಸಾಹ ಮತ್ತು ಮಾರ್ಗದರ್ಶನ ಮಾಡಬೇಕು.
ತೀರ್ಪುಗಾರರು ಪ್ರತಿಭೆಯನ್ನು ಮಾತ್ರ ಪರಿಗಣಿಸಬೇಕು’ ಎಂದು ಪ್ರತಿಭಾ ಕಾರಂಜಿಯನ್ನು ಉದ್ಘಾಟಿಸಿದ ಶಾಸಕ ಡಾ.ಸುಧಾಕರ್ ತಿಳಿಸಿದರು. ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಕೃಷ್ಣಮೂರ್ತಿ, ಜಿಲ್ಲಾ ಉಪಸಮನ್ವಯಾಧಿಕಾರಿ ಮಂಜುನಾಥ್, ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀಕಂಠ, ಆರ್.ಸಿ.ರೆಡ್ಡಪ್ಪ, ಹನುಮಂತಪ್ಪ, ದೈಹಿಕ ಶಿಕ್ಷಣ ಶಿಕ್ಷಕ ಮಾರುತಿ, ಅನೀತಾ ರವೀಂದ್ರರೆಡ್ಡಿ ಹಾಜರಿದ್ದರು.