ಕೆಲವು ಜಾತಿಗಳಿಗೆ ಸಂವಿಧಾನ ಬದ್ಧವಾಗಿಯೇ ಮೀಸಲಾತಿಯನ್ನು ಒದಗಿಸಲಾಗುತ್ತಿದೆ. ಇದರ ಮೂಲ ಉದ್ದೇಶ ಒಳ್ಳೆಯದೇ. ಆದರೆ ಈ ಸವಲತ್ತು ಈಗ ದುರ್ಬಳಕೆಯಾಗುತ್ತಿದೆ. ಶಿಕ್ಷಣ ಹಾಗೂ ಉದ್ಯೋಗದಲ್ಲಿ ಮೀಸಲಾತಿಯನ್ನು ಪಡೆಯುತ್ತಿರುವ ಜಾತಿಗಳವರು ಹಿಂದುಳಿದಿದ್ದಾರೆ ಎಂಬುದು ನಿಜ.
ಅವರನ್ನು ಮೇಲೆತ್ತುವುದಕ್ಕೆ ಸ್ಪರ್ಧೆಯನ್ನು ಇಲ್ಲವಾಗಿಸಿ ಅವಕಾಶ ಕಲ್ಪಿಸುವುದರಲ್ಲಿ ಅರ್ಥವಿಲ್ಲ. ಇದರ ಬದಲಿಗೆ ಸ್ಪರ್ಧೆಯಲ್ಲಿ ಭಾಗವಹಿಸಲು ಅವರನ್ನು ಶಕ್ತರನ್ನಾಗಿಸಬೇಕು. ಇದಕ್ಕೆ ಅವರಿಗೆ ಅಗತ್ಯವಿರುವ ವಿಶೇಷ ತರಬೇತಿ ಮತ್ತು ಶಿಕ್ಷಣ ಇತ್ಯಾದಿಗಳನ್ನು ಉಚಿತವಾಗಿ ಒದಗಿಸಬೇಕು. ಇದರಿಂದಾಗಿ ಹಿಂದುಳಿದವರ ಬೌದ್ಧಿಕ ಮಟ್ಟ ಹೆಚ್ಚಾಗುತ್ತದೆ. ಅವರು ಇತರರೊಂದಿಗೆ ಸ್ಪರ್ಧಿಸಿ ತಮ್ಮಿಷ್ಟದ ಹುದ್ದೆಗಳಿಗೇರುತ್ತಾರೆ.
ಈಗಿನ ಮೀಸಲಾತಿ ವ್ಯವಸ್ಥೆಯಲ್ಲಿ ವೈದ್ಯ, ವಿಜ್ಞಾನಿ, ವಾಸ್ತುಶಿಲ್ಪಿಯಂಥ ಪರಿಣಿತರ ಅಗತ್ಯವಿರುವ ವೃತ್ತಿಗಳಿಗೂ ಅರ್ಹತೆ ಇಲ್ಲದವರೇ ಬಂದುಬಿಡುತ್ತಾರೆ. ಎಲ್ಲಾ ಕ್ಷೇತ್ರಗಳಲ್ಲಿಯೂ ಪ್ರತಿಭೆಗೆ ಮೊದಲ ಮನ್ನಣೆ ದೊರೆಯಬೇಕಾದುದು ಅಗತ್ಯ. ಹಾಗಾಗಿ ಪ್ರತಿಭೆಗಳನ್ನು ಸೃಷ್ಟಿಸುವುದಕ್ಕೆ ವಿಶೇಷ ಸವಲತ್ತುಗಳನ್ನು ಕಲ್ಪಿಸಬೇಕೇ ಹೊರತು ಪ್ರತಿಭೆಯನ್ನು ಕಡೆಗಣಿಸುವ ಮೀಸಲಾತಿಯಲ್ಲ.