ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರತಿಮೆ ಯಾಕೆ ಬೇಕು?

Last Updated 16 ಫೆಬ್ರುವರಿ 2011, 16:10 IST
ಅಕ್ಷರ ಗಾತ್ರ

‘ರಾಜಧಾನಿಯಲ್ಲಿ ಭುವನೇಶ್ವರಿ ದೇವಿಯ ಬೃಹತ್ ಪ್ರತಿಮೆ ಸ್ಥಾಪಿಸಲು 25 ಕೋಟಿ ರೂಪಾಯಿ ಮತ್ತು ಸಮ್ಮೇಳನದ ನೆನಪಿಗಾಗಿ ಸ್ಮಾರಕ ಭವನ ನಿರ್ಮಿಸಲು ಐದು ಕೋಟಿ ರೂಪಾಯಿ ನೀಡಲಾಗುವುದು’ ಎಂದು ಮುಖ್ಯಮಂತ್ರಿಯವರು ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಘೋಷಿಸಿದ್ದಾರೆ.

ಈ ಘೋಷಣೆಯ ಬಗ್ಗೆ ಓದಿ ನಮ್ಮ ರಾಜ್ಯದ ಎಷ್ಟು ಲಕ್ಷ ಜನ ಬಡ ಬಗ್ಗರಿಗೆ, ದೀನ ದಲಿತರಿಗೆ, ಇನ್ನೂ ಸೂಕ್ತ ನೆಲೆ ಕಾಣಲಾಗದೇ ತತ್ತರಿಸುತ್ತಿರುವ ಉತ್ತರ ಕರ್ನಾಟಕದ ನೆರೆ ಹಾವಳಿ ಸಂತ್ರಸ್ತರಿಗೆ ಅದೆಷ್ಟು ಆನಂದವಾಗಿರಬಹುದು ಎಂದು ಅಳೆಯಲು ಯಾರಿಂದಾದರೂ ಸಾಧ್ಯವೆ?

ತಮಗೆ ಬೇಕೆನಿಸಿದ ಮಠಗಳಿಗೆ, ದೇವಾಲಯಗಳಿಗೆ, ಕೋಟಿ ಕೋಟಿ ರೂಪಾಯಿ ದೇಣಿಗೆ ನೀಡಲು, ಪ್ರತಿಮೆಗಳ ಸ್ಥಾಪನೆಗೆಂದು, ಸ್ಮಾರಕಗಳ ನಿರ್ಮಾಣಕ್ಕೆಂದು ಕೋಟ್ಯಂತರ ರೂಪಾಯಿ ಸರ್ಕಾರದ ಹಣಪೋಲು ಮಾಡಲು, ಆ ಹಣವು ಮುಖ್ಯಮಂತ್ರಿಯವರ ಅಥವಾ ಯಾವುದೇ ಸಚಿವರ ಸ್ವಂತ ಆಸ್ತಿಯಲ್ಲ ಎಂಬ ತಿಳಿವಳಿಕೆಯಿಲ್ಲದ ಅಥವಾ ತಿಳಿದಿದ್ದೂ ತಿಳಿಯದವರಂತೆ ವರ್ತಿಸುವ ಅಧಿಕಾರಸ್ಥ ರಾಜಕಾರಣಿಗಳನ್ನು ಹೊಂದಿರುವ ಕರ್ನಾಟಕದ ಶ್ರೀಸಾಮಾನ್ಯರು ತಮ್ಮ ಹಿಂದಿನ ಜನ್ಮಗಳಲ್ಲಿ ಎಂಥೆಂಥಾ ಪಾಪ ಕರ್ಮಗಳನ್ನು ಮಾಡಿದ್ದರೋ ಅರ್ಥವಾಗುತ್ತಿಲ್ಲ.

ಬೆಂಗಳೂರಿನ ಯಾವುದೋ ಉದ್ಯಾನದಲ್ಲೋ, ಬೀದಿಯ ಬದಿಯಲ್ಲೋ, ವಿಧಾನಸೌಧದ ಅಂಗಳದಲ್ಲೋ, ಕಸಾಪ ಆವರಣದಲ್ಲೋ ಪ್ರತಿಮೆಯಾಗಿ ನಿಲ್ಲುವ ಬದಲು, ನಾಡಿನ ಸಮಸ್ತ ಕನ್ನಡಿಗರ ಹೃದಯಗಳಲ್ಲಿ ನೆಲೆಗೊಂಡು, ಕನ್ನಡವನ್ನು ಕರ್ನಾಟಕದಲ್ಲಿ ಉಳಿಸಲು-ಬೆಳೆಸಲು ಅಗತ್ಯವಾದ ಚೈತನ್ಯವನ್ನು ಕನ್ನಡಿಗರೆಲ್ಲರಿಗೂ ನೀಡಲು ತಾಯಿ ಭುವನೇಶ್ವರಿಗೆ ಹೆಚ್ಚಿನ ಸಂತೋಷವಾಗಬಹುದು ಎಂಬುದು ನನ್ನ ಹಾಗೂ ನನ್ನಂಥಾ ಹಲವರ ಅಂತರಾಳದ ಅನಿಸಿಕೆಯಾಗಿದೆ.
 

    
 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT