ಭಾಲ್ಕಿ: ನಮ್ಮ ಸಂವಿಧಾನದಲ್ಲಿ ನಾಗರಿಕರ ಸೌಖ್ಯ ಮತ್ತು ಸಮೃದ್ಧ ಜೀವನಕ್ಕಾಗಿ ಅನೇಕ ಕಾನೂನು ಕಟ್ಟಳೆಗಳಿವೆ. ಅವುಗಳ ಬಗ್ಗೆ ಕನಿಷ್ಠ ಅರಿವು ನೌಕರ ವರ್ಗಕ್ಕೆ ಇರಬೇಕು ಎಂದು ಹಿರಿಯ ಶ್ರೇಣಿ ನ್ಯಾಯಾಧೀಶ ಶಿವಾಜಿರಾವ ನೆಲವಾಡೆ ಅವರು ನುಡಿದರು.
ಪಟ್ಟಣದ ನ್ಯಾಯಾಲಯ ಆವರಣದಲ್ಲಿ ಕಂದಾಯ ಇಲಾಖೆಯ ತಾಲೂಕು ಕಾನೂನು ಸೇವಾ ಸಮಿತಿಯಿಂದ ಈಚೆಗೆ ನಡೆದ ಕಾನೂನು ಅರಿವು ಮತ್ತು ನೆರವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕಿರಿಯ ಶ್ರೇಣಿ ನ್ಯಾಯಾಧೀಶ ಪ್ರಕಾಶ ಬನ್ಸೋಡೆ ಅವರು ಮಾತನಾಡಿ, ಹಳ್ಳಿಗಳಲ್ಲಿನ ಮುಗ್ಧ ಜನರಿಗೆ ಕಂದಾಯ ಇಲಾಖೆಯ ನೌಕರರ ಸಂಪರ್ಕ ಹೆಚ್ಚು ಇರುತ್ತದೆ. ಹಾಗಾಗಿ ಜನರಿಗೆ ಕಾನೂನಿನ ಕುರಿತ ತಿಳಿವಳಿಕೆ ನೀಡಬೇಕು ಎಂದು ಹೇಳಿದರು.
ವಕೀಲರ ಸಂಘದ ಅಧ್ಯಕ್ಷ ಎನ್.ಬಿ. ಪಾಟೀಲ ಅಧ್ಯಕ್ಷತೆ ವಹಿಸಿದ್ದರು.
ಬಂಡೆಪ್ಪ ಎಂ ನಿಡೇಬನ್, ಸಂಘದ ಉಪಾಧ್ಯಕ್ಷ ಶ್ರೀಶೈಲ ಪಾಟೀಲ, ಕಾರ್ಯದರ್ಶಿ ಶತ್ರುಘನ ನೆಲವಾಡೆ, ಮಹಾದೇವಪ್ಪ ಸತ್ಯಗಿರಿ, ವೈಜಿನಾಥ ಸಿರ್ಸ್ಗಿ, ನಾಗನಾಥ ಸ್ವಾಮಿ ಮುಂತಾದವರು ಇದ್ದರು.