ಕುಶಾಲನಗರ: ಕುಶಾಲನಗರಕ್ಕೆ ಕಾಂಗ್ರೆಸ್ನ ಪ್ರತ್ಯೇಕ ಬ್ಲಾಕ್ ಘಟಕ ರಚಿಸುವಂತೆ ಒತ್ತಾಯಿಸಿ ಇಲ್ಲಿನ ಬ್ಲಾಕ್ ಕಾಂಗ್ರೆಸ್ ಪ್ರಮುಖರ ನಿಯೋಗ ಕೆಪಿಸಿಸಿ ಅಧ್ಯಕ್ಷ ಡಾ. ಪರಮೇಶ್ವರ್ ಬಳಿಗೆ ತೆರಳಿ ಈಚೆಗೆ ಮನವಿ ಸಲ್ಲಿಸಿತು.
ಮಡಿಕೇರಿ ವಿಧಾನಸಭಾ ಕ್ಷೇತ್ರ ಕೊಡಗು ಜಿಲ್ಲೆಯಲ್ಲಿ ಅತ್ಯಂತ ಹೆಚ್ಚಿನ ವಿಸ್ತೀರ್ಣ ಹೊಂದಿದ್ದು, ಪಕ್ಷವನ್ನು ಬಲಪಡಿಸುವ ಕಾರ್ಯ ಸರಿಯಾಗಿ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ನಿಯೋಗದ ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದರು. ಮೊದಲು ಸೋಮವಾರಪೇಟೆ ಹಾಗೂ ಕುಶಾಲನಗರ ಎಂದು ಎರಡು ಪ್ರತ್ಯೇಕ ಬ್ಲಾಕ್ ಘಟಕಗಳಿದ್ದವು. ಆಗ ಪಕ್ಷ ಉತ್ತಮವಾಗಿ ಸಂಘಟನೆಗೊಂಡಿತ್ತು. ಆದರೆ, ಎರಡೂ ಘಟಕಗಳನ್ನು ವಿಲೀನಗೊಳಿಸಿದ ನಂತರ ಕುಶಾಲನಗರ ಬ್ಲಾಕ್ ಘಟಕದಲ್ಲಿ ಕಾಂಗ್ರೆಸ್ ಸಂಘಟನಾ ಶಕ್ತಿ ದಿನೇ ದಿನೇ ಕುಸಿಯುತ್ತಿದೆ.
ಮುಂಬರುವ ಲೋಕಸಭಾ ಚುನಾವಣೆ ವೇಳೆಗೆ ಪಕ್ಷವನ್ನು ಸಜ್ಜುಗೊಳಿಸಲು ಪ್ರತ್ಯೇಕವಾದ ಕುಶಾಲನಗರ ಬ್ಲಾಕ್ ಘಟಕವನ್ನು ಮರಳಿ ರಚಿಸಲು ಅವಕಾಶ ನೀಡಬೇಕು ಎಂದು ಕಾರ್ಯಕರ್ತರು ಪರಮೇಶ್ವರ್ ಅವರಲ್ಲಿ ಕೋರಿಕೊಂಡರು. ಕಾರ್ಯಕರ್ತರು ಹಾಗೂ ಪಕ್ಷದ ಮುಖಂಡರ ಕೋರಿಕೆಯ ಮೇರೆಗೆ ಕುಶಾಲನಗರ ಬ್ಲಾಕ್ ಘಟಕವನ್ನು ಪುನರ್ ರಚಿಸುವ ಕುರಿತಾಗಿ ಸದ್ಯದಲ್ಲಿಯೇ ಅಗತ್ಯ ಕ್ರಮ ಕೈಗೊಳ್ಳುತ್ತೇನೆ ಎಂದು ಕೆಪಿಸಿಸಿ ಅಧ್ಯಕ್ಷರು ಭರವಸೆ ನೀಡಿದರು ಎಂದು ನಿಯೋಗದ ಪ್ರಮುಖರು ತಿಳಿಸಿದ್ದಾರೆ.
ವಕೀಲ ಎಚ್.ಎಸ್. ಚಂದ್ರಮೌಳಿ, ಲೋಕಾಸಭಾ ಚುನಾವಣೆ ವೇಳೆಗೆ ಪಕ್ಷ ಬಲಗೊಳ್ಳಬೇಕಿದೆ. ಆ ನಿಟ್ಟಿನಲ್ಲಿ ಪಕ್ಷದ ಕಾರ್ಯಕರ್ತರು ಸರ್ಕಾರದ ಯೋಜನೆಗಳನ್ನು ಪ್ರತ ಮನೆ– ಮನೆಗೆ ತಲುಪಿಸುವ ಮೂಲಕ ಪಕ್ಷವನ್ನು ಸಂಘಟಿಸಲು ಒತ್ತು ಕೊಡಬೇಕು. ಪಕ್ಷದ ಕೆಲವು ಪದಾಧಿಕಾರಿಗಳಲ್ಲಿ ಇರುವ ಅಸಮಾಧಾನಗಳನ್ನು ಪಕ್ಷದ ವೇದಿಕೆಗಳಲ್ಲಿ ಬಗೆಹರಿಸಿಕೊಳ್ಳುವ ಪ್ರಯತ್ನ ಮಾಡಬೇಕು ಎಂದರು.
ಪಕ್ಷದ ಮತ್ತೊಬ್ಬ ಮುಖಂಡ ನಾಪಂಡ ಮುತ್ತಪ್ಪ ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ರಚನೆಗೊಂಡ ನಂತರ ರಾಜ್ಯದಲ್ಲಿ ಅಭಿವೃದ್ಧಿಯ ಹೊಸ ಪಥ ಆರಂಭಗೊಂಡಿದೆ. ಇದನ್ನು ಬಳಸಿಕೊಂಡು ಕಾರ್ಯಕರ್ತರು ಪಕ್ಷವನ್ನು ಬಲಿಷ್ಠಗೊಳಿಸಬೇಕಾದ ಅಗತ್ಯವಿದೆ ಎಂದರು.
ಕೆಪಿಸಿಸಿ ಸದಸ್ಯೆ ಕೆ.ಪಿ. ಚಂದ್ರಕಲಾ ಹಾಗೂ ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಬಿ.ಎಸ್. ಚಂದ್ರಶೇಖರ್ ಸೇರಿದಂತೆ ಕುಶಾಲನಗರ, ಕೂಡಿಗೆ, ಶನಿವಾರಸಂತೆ, ಕೊಡ್ಲಿಪೇಟೆಯ ಕಾಂಗ್ರೆಸ್ ಪ್ರಮುಖರು ನಿಯೋಗದಲ್ಲಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.