ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರತ್ಯೇಕ ಪ್ರಕರಣ:ರೂ10 ಲಕ್ಷ ನಗದು ವಶ

Last Updated 26 ಏಪ್ರಿಲ್ 2013, 6:12 IST
ಅಕ್ಷರ ಗಾತ್ರ

ಬಳ್ಳಾರಿ: ನಗರದ ಹೊಸಪೇಟೆ ರಸ್ತೆಯಲ್ಲಿರುವ ತನಿಖಾ ಠಾಣೆಯ ಸಿಬ್ಬಂದಿ ಸೂಕ್ತ ದಾಖಲೆಗಳಿಲ್ಲದೆ ಸಾಗಿಸುತ್ತಿದ್ದ ರೂ 9.5  ವಶಪಡಿಸಿಕೊಂಡು, ಒಂದು ಬೈಕ್, ಒಂದು ಬೊಲೆರೋ ವಾಹನ ಹಾಗೂ ನಾಲ್ಕು ಜನರನ್ನು ಗುರುವಾರ ಬಂಧಿಸಿದ್ದಾರೆ.

ಗುರುವಾರ ಬೆಳಿಗ್ಗೆ ತೋರಣಗಲ್‌ನಿಂದ ಬಳ್ಳಾರಿಗೆ ಸೂಕ್ತ ದಾಖಲೆಗಳಿಲ್ಲದ ಬೈಕ್‌ನಲ್ಲಿ ಸಾಗಿಸುತ್ತಿದ್ದ ರೂ 2.18 ಲಕ್ಷ ಹಣ ಹಾಗೂ ಬೈಕ್‌ನ್ನು ವಶಪಡಿಸಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ರಜನೀಶ್ ಹಾಗೂ ಗಣೇಶ್ ಎಂಬುವವರನ್ನು ಕೌಲ್‌ಬಝಾರ್ ಪೊಲೀಸರು ಬಂಧಿಸಿದ್ದಾರೆ.

ಮಧ್ಯಾಹ್ನ ನಗರದಿಂದ ಜಿಂದಾಲ್ ಉಕ್ಕಿನ ಕಾರ್ಖಾನೆಯ ಕಡೆಗೆ ಸೂಕ್ತ ದಾಖಲೆಗಳಿಲ್ಲದೆ ಸಾಗಿಸುತ್ತಿದ್ದ ರೂ. 6,82,500ಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಈ ಸಂಬಂಧ ಉದಯ್ ಮುಖರ್ಜಿ ಎಂಬುವವರನ್ನು ಬಂಧಿಸಿ ತನಿಖೆ ಕೈಗೊಳ್ಳಲಾಗುತ್ತಿದೆ ಎಂದು ಕೌಲ್ ಬಜಾರ್ ಪೊಲೀಸ್ ಠಾಣೆಯ ಸಿಪಿಐ ವೈ.ಡಿ.ಅಗಸಿಮನಿ ತಿಳಿಸಿದ್ದಾರೆ.

ಪ್ರಕರಣದಲ್ಲಿ ಹಣದ ಜೊತೆಗೆ ಬೊಲೆರೋ ವಾಹನ ಹಾಗೂ ಚಾಲಕನನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಹೊಸಪೇಟೆಯಲ್ಲಿ ನಗದು ವಶ
ಹೊಸಪೇಟೆ
: ಚುನಾವಣಾ ಪ್ರಚಾರವೇಳೆ ಮತದಾರರಿಗೆ ಹಂಚಲು ತಂದಿದ್ದರೂ1.05ಲಕ್ಷ ನಗದನ್ನು ಹೊಸಪೇಟೆ ಬಡಾವಣಾ ಪೊಲೀಸರು ಗುರುವಾರ ಮಧ್ಯಾಹ್ನ ವಶಪಡಿಸಿಕೊಂಡಿದ್ದಾರೆ.

ಮಧ್ಯಾಹ್ನ 3 ಗಂಟೆ ಸುಮಾರಿಗೆ ಸಂಡೂರಿನಿಂದ ಮಹಮ್ಮದ್ ಇಲಿಯಾಸ್  ಎಂಬ ವ್ಯಕ್ತಿ ದ್ವಿಚಕ್ರವಾಹನದಲ್ಲಿ ಮತದಾರರಿಗೆ ಹಂಚಲು ತಂದಿದ್ದ ಹಣವನ್ನು ಸಂಡೂರು ಬೈಪಾಸ್ ಬಳಿಯ ಚೆಕ್‌ಪೋಸ್ಟ್‌ನಲ್ಲಿ ತಪಾಸಣಾ ವೇಳೆ ವಶಪಡಿಸಿಕೊಂಡಿದ್ದಾರೆ. ಚುನಾವಣಾ ವೇಳೆ, ಸಮರ್ಪಕ ದಾಖಲೆಗಳಿಲ್ಲದೆ ತಂದಿದ್ದರಿಂದ ಮತದಾರರಿಗೆ ಹಂಚಲೆಂದೆ ತಂದಿರುವುದು ಎಂದು ದೃಢಪಡಿಸಿರುವ ಬಡಾವಣೆ ಠಾಣೆಯ ಪೊಲೀಸರು ಆರೋಪಿ ಮಹಮ್ಮದ್ ಇಲಿಯಾಸ್‌ನನ್ನು ದ್ವಿಚಕ್ರವಾಹನ ಹಾಗೂ ನಗದು ಹಣದೊಂದಿಗೆ ವಶಕ್ಕೆ ತೆಗೆದುಕೊಂಡು ಪ್ರಕರಣ ದಾಖಲಿಸಿದ್ದಾರೆ.

ಆರು ದ್ವಿಚಕ್ರ ವಾಹನ ವಶಕ್ಕೆ
ಕಂಪ್ಲಿ:
ಹೊಲದಲ್ಲಿ ಬಾಡೂಟ ವ್ಯವಸ್ಥೆ ನಡೆಯುತ್ತಿದೆ ಎನ್ನುವ ವಿಷಯ ತಿಳಿದು ಸ್ಥಳಕ್ಕೆ ಧಾವಿಸಿದ ಚುನಾವಣಾ ಎಂಸಿಸಿ ತಂಡದವರು ಆರು ದ್ವಿಚಕ್ರ  ವಾಹನಗಳನ್ನು ವಶಕ್ಕೆ ಪಡೆದಿರುವ ಘಟನೆ ಕಂಪ್ಲಿ ವಿಧಾನಭಾಕ್ಷೇತ್ರ ವ್ಯಾಪ್ತಿಯ ಮೆಟ್ರಿ ಗ್ರಾಮದಲ್ಲಿ ಬುಧವಾರ ರಾತ್ರಿ ಜರುಗಿದೆ.

ಎಂಸಿಸಿ ತಂಡದ ಅಧಿಕಾರಿಗಳು ಹೊಲದಲ್ಲಿ ದಾಳಿ ಮಾಡುತ್ತಿದ್ದಂತೆ ಊಟ ಮಾಡುತ್ತಿದ್ದವರು ದ್ವಿಚಕ್ರ ವಾಹನಗಳನ್ನು ಬಿಟ್ಟು ಪರಾರಿಯಾಗಿದ್ದಾರೆ. ಗ್ರಾಮದ ಹೊರ ವಲಯದ ಹೊಲದಲ್ಲಿ ಅಕ್ರಮವಾಗಿ ಸುಮಾರು 100 ಜನ ಸೇರಿ ಬಾಡೂಟ ಮಾಡುತ್ತಿದ್ದರು ಎನ್ನಲಾಗಿದೆ.  ಈ ಸಂದರ್ಭದಲ್ಲಿ ಅಧಿಕಾರಿಗಳನ್ನು ಗಮನಿಸಿದ ಜನ ಅಲ್ಲಿಂದ ಪರಾರಿಯಾಗಿದ್ದಾರೆ.

ಸ್ಥಳದಲ್ಲಿದ್ದ ಆರು ದ್ವಿಚಕ್ರ ವಾಹನಗಳನ್ನು ವಶಕ್ಕೆ ತೆಗೆದುಕೊಂಡು ಹೊಲದ ಮಾಲೀಕರ ವಿರುದ್ಧ ದೂರು ದಾಖಲಿಸಿಕೊಂಡಿರುವುದಾಗಿ ಎಂಸಿಸಿ ತಂಡದ ಸದಸ್ಯ ಹಾಗೂ ಉಪ ತಹಶೀಲ್ದಾರ್ ಕೆ. ಬಾಲಪ್ಪ ತಿಳಿಸಿದ್ದಾರೆ.  

ಹಣ ವಶ: ನಂತರ ವಾಪಸ್
ಬಳ್ಳಾರಿ: 
ನಗರದಲ್ಲಿ ಬುಧವಾರ ರಾತ್ರಿ ವ್ಯಕ್ತಿಯೊಬ್ಬನಿಂದ ಸೂಕ್ತ ದಾಖಲೆಗಳಿಲ್ಲದ ರೂ 9.95 ಲಕ್ಷ ಹಣವನ್ನು ವಶಪಡಿಸಿಕೊಂಡು ತನಿಖೆ ನಡೆಸಿ ನಂತರ ವ್ಯಕ್ತಿಗೆ ಹಣ ವಾಪಾಸ್ ನೀಡಿದ ಘಟನೆ ಗುರುವಾರ ಜರುಗಿದೆ.

ಆಂಧ್ರಪ್ರದೇಶದ ಕದರಿ ಗ್ರಾಮದ ಹುಣಿಸೆ ಹಣ್ಣಿನ ವ್ಯಾಪಾರಿ ಮಹಮ್ಮದ್ ರಫೀಕ್ ತಾನು ತಂದ ಹುಣಿಸೆ ಹಣ್ಣನ್ನು ನಗರದ ವ್ಯಾಪಾರಿಗಳಿಗೆ ಮಾರಿ ಹಣ ಪಡೆದುಕೊಂಡು ನಗರದ ನೂತನ ಬಸ್ ನಿಲ್ದಾಣದಲ್ಲಿ ತನ್ನ ಊರಿಗೆ ಹೋಗಲು ಬಸ್ಸಿಗಾಗಿ ಕಾಯುತ್ತಿದ್ದ.

ನಗರದೆಲ್ಲೆಡೆ ಗಸ್ತು ತಿರುಗಿ ಬಸ್ ನಿಲ್ದಾಣಕ್ಕೆ ಆಗಮಿಸಿದ  ಡಿಸಿಐಬಿ ಇನ್ಸ್‌ಪೆಕ್ಟರ್ ಉಮೇಶ್, ಈಶ್ವರ್ ನಾಯ್ಕ ನೇತೃತ್ವದ ತಂಡ ತಮಗೆ ದೊರೆತ ಖಚಿತ ಮಾಹಿತಿಯ ಆಧಾರದ ಮೇರೆಗೆ ಬಸ್ ನಿಲ್ದಾಣಕ್ಕೆ ತೆರಳಿದಾಗ ತಮ್ಮನ್ನು ಕಂಡೊಡನೆ ತಡಬಡಾಯಿಸಿದ ವ್ಯಕ್ತಿಯನ್ನು ವಶಕ್ಕೆ ತೆಗೆದುಕೊಂಡು ಪರಿಶೀಲಿಸಿದಾಗ ಹಣ ಪತ್ತೆಯಾಗಿದೆ ಎಂದು ತಿಳಿಸಿದ್ದಾರೆ.

ಸೂಕ್ತ ದಾಖಲೆ ಇಲ್ಲದ ಕಾರಣ ನಗರದ ಬ್ರೂಸ್‌ಪೇಟೆ ಪೊಲೀಸ್ ಠಾಣೆಯಲ್ಲಿ  ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ನಡೆಸಿದ ನಂತರ ಗುರುವಾರ ಬೆಳಿಗ್ಗೆ ಮಹಮ್ಮದ್ ರಫೀಕ್ ತನ್ನ ವಹಿವಾಟಿನ ವಿವರಗಳನ್ನು ಸೂಕ್ತ ದಾಖಲೆಗಳ ಸಮೇತ ತೆಗೆದುಕೊಂಡು ಬಂದು ಹಣವನ್ನು ವಾಪಸ್ ಪಡೆದುಕೊಂಡಿದ್ದಾನೆ ಎಂದು   ಬ್ರೂಸ್‌ಪೇಟೆ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಬೋಪಯ್ಯ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT