ಬೆಂಗಳೂರು: ಕಬ್ಬನ್ಪಾರ್ಕ್, ರಾಜಾಜಿನಗರ ಸಂಚಾರ ಠಾಣೆ ವ್ಯಾಪ್ತಿಯಲ್ಲಿ ಕಳೆದ 24 ಗಂಟೆಯಲ್ಲಿ ನಡೆದ ಪ್ರತ್ಯೇಕ ಅಪಘಾತ ಪ್ರಕರಣಗಳಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ.
ಕಸ್ತೂರ ಬಾ ರಸ್ತೆಯ ಪಾದಚಾರಿ ಮಾರ್ಗದ ತಡೆಗೋಡೆಗೆ ದ್ವಿಚಕ್ರ ವಾಹನ ಗುದ್ದಿಸಿ ಸಂಭವಿಸಿದ ಅಪಘಾತದಲ್ಲಿ ಅಮ್ಜಾದ್ಪಾಷಾ (56) ಎಂಬುವರು ಸಾವನ್ನಪಿರುವ ಘಟನೆ ಶುಕ್ರವಾರ ಬೆಳಿಗ್ಗೆ ಸಂಭವಿಸಿದೆ.
ಬನಶಂಕರಿ ನಿವಾಸಿ ಅಮ್ಜದ್ಪಾಷಾ ಶಿವಾಜಿನಗರದ ಮಾರುಕಟ್ಟೆಯಲ್ಲಿ ಮೀನು ವ್ಯಾಪಾರ ಮಾಡುತ್ತಿದ್ದರು. ಬೆಳಿಗ್ಗೆ 5.30ರ ಸುಮಾರಿಗೆ ಮಾರುಕಟ್ಟೆಗೆ ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದ ಅವರು, ಸಿದ್ದಲಿಂಗಯ್ಯ ವೃತ್ತ ಸಮೀಪದ ಪಾದಚಾರಿ ಮಾರ್ಗದ ತಡೆಗೋಡೆಗೆ ವಾಹನ ಗುದ್ದಿಸಿದ್ದು ಘಟನೆಯಲ್ಲಿ ಅವರ ತಲೆಗೆ ಪೆಟ್ಟು ಬಿತ್ತು. ಬೌರಿಂಗ್ ಆಸ್ಪತ್ರೆಗೆ ಕೊಂಡೊಯ್ಯುವ ಮಾರ್ಗ ಮಧ್ಯೆ ಅವರು ಸಾವನ್ನಪ್ಪಿದರು ಎಂದು ಕಬ್ಬನ್ಪಾರ್ಕ್ ಠಾಣೆ ಪೊಲೀಸರು ತಿಳಿಸಿದ್ದಾರೆ.
ಯುವಕ ಸಾವು: ವಾಟಾಳ್ನಾಗರಾಜ್ ರಸ್ತೆಯ ಪಾದಚಾರಿ ಮಾರ್ಗದ ತಡೆಗೋಡೆಗೆ ಬೈಕ್ ಗುದ್ದಿಸಿದ ಪರಿಣಾಮ, ಹಿಂಬದಿ ಕುಳಿತಿದ್ದ ಸುತ್ತಾಲಾಲ್ (19) ಎಂಬ ಯುವಕ ಸಾವನ್ನಪ್ಪಿರುವ ಘಟನೆ ಗುರುವಾರ ಸಂಭವಿಸಿದೆ.
ರಾಜಸ್ಥಾನ ಮೂಲದವರಾದ ಸುತ್ತಾಲಾಲ್ ಕಾಟನ್ಪೇಟೆಯ ಅಂಗಡಿಯಲ್ಲಿ ಕೆಲಸ ಮಾಡಿಕೊಂಡು ಅಲ್ಲೇ ವಾಸಿಸುತ್ತಿದ್ದರು. ರಾತ್ರಿ ಸ್ನೇಹಿತ ಮಹೇಂದ್ರಕುಮಾರ್ ಜತೆ ರಾಜಾಜಿನಗರದ ಸ್ನೇಹಿತನ ಮನೆಗೆ ಊಟಕ್ಕೆ ಹೋಗಿದ್ದರು. ವಾಪಸ್ ತೆರಳುವಾಗ ದುರ್ಘಟನೆ ನಡೆದಿದೆ. ರಾಜಾಜಿನಗರ ಸಂಚಾರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.