ನವದೆಹಲಿ: ಎಫ್ಡಿಐ ವಿಷಯದಲ್ಲಿ ಯುಪಿಎ ಮೈತ್ರಿಕೂಟದಿಂದ ಹೊರ ಬಿದ್ದ ಎರಡು ತಿಂಗಳ ಬಳಿಕ ಇದೇ ಮೊದಲ ಬಾರಿ ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಅವರು ಪ್ರಧಾನಿ ಮನಮೋಹನ್ ಸಿಂಗ್ ಜತೆ ವೇದಿಕೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಕೋಲ್ಕತದಲ್ಲಿ ಜನವರಿ 3ರಂದು ನಡೆಯಲಿರುವ ಭಾರತೀಯ ವಿಜ್ಞಾನ ಸಮ್ಮೇಳನದ ಉದ್ಘಾಟನೆಯಲ್ಲಿ ಸಿಂಗ್ ಹಾಗೂ `ದೀದಿ' ಮುಖಾಮುಖಿಯಾಗಲಿದ್ದಾರೆ.
ಯುಪಿಎಗೆ ನೀಡಿದ್ದ ಬೆಂಬಲ ವಾಪಸ್ ಪಡೆದ ಬಳಿಕ ಮಮತಾ, ಖಾಸಗಿ ಸುದ್ದಿ ವಾಹಿನಿಗೆ ನೀಡಿದ್ದ ಸಂದರ್ಶನದಲ್ಲಿ ಪ್ರಧಾನಿ ಸಿಂಗ್ ಅವರ ಮೃದು ಮಾತಿನ ಶೈಲಿಯನ್ನು ಅಣಕಿಸಿದ್ದರು. ಅಲ್ಲದೇ ಅವರನ್ನು ಕಟುವಾಗಿ ಟೀಕಿಸಿದ್ದರು.
ಇದಕ್ಕಾಗಿ `ದೀದಿ' ರಾಜ್ಯ ಹಾಗೂ ದೆಹಲಿಯ ಕಾಂಗ್ರೆಸ್ ಮುಖಂಡರ ಕೆಂಗಣ್ಣಿಗೂ ಗುರಿಯಾಗಿದ್ದರು. ಇಷ್ಟೆಲ್ಲ ಆದ ಬಳಿಕ ಇದೀಗ ಮಮತಾ, ಪ್ರಧಾನಿ ಜತೆ ವೇದಿಕೆ ಹಂಚಿಕೊಳ್ಳುತ್ತಿರುವುದು ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ.