ಭದ್ರಾವತಿ: ಜಾತಿ ಮತ್ತು ಆದಾಯ ಪ್ರಮಾಣಪತ್ರ ನೀಡುವಲ್ಲಿ ತಹಶೀಲ್ದಾರ್ ಕಚೇರಿ ವಿಳಂಬ ಧೋರಣೆ ತಾಳಿದೆ ಎಂದು ಆರೋಪಿಸಿ ನಾಗರಿಕರು ಸೋಮವಾರ ಪ್ರತಿಭಟನೆ ನಡೆಸಿದರು.
ಬೆಳಿಗ್ಗೆ ತಾಲ್ಲೂಕು ಕಚೇರಿ ಆವರಣದಲ್ಲಿ ಧರಣಿ ನಡೆಸಿದ ನಾಗರಿಕರು ತಹಶೀಲ್ದಾರ್ ಧೋರಣೆ ಕಾರಣ ಜಾತಿ, ಆದಾಯ ಪ್ರಮಾಣಪತ್ರ ಪಡೆಯಲು ಪರದಾಟ ಮಾಡುವ ಸ್ಥಿತಿ ನಿರ್ಮಾಣವಾಗಿದೆ ಎಂದು ಪ್ರತಿಭಟನಾಕಾರರು ದೂರಿದರು.
ತಿಂಗಳು ಕಳೆದರೂ ಯಾವುದೇ ಪ್ರಮಾಣಪತ್ರ ಸಿಕ್ಕುತ್ತಿಲ್ಲ. ಇದರಿಂದಾಗಿ ಶಾಲಾ, ಕಾಲೇಜು ವಿದ್ಯಾರ್ಥಿಗಳು, ಸರ್ಕಾರದ ವಿವಿಧ ಯೋಜನೆಗಳಿಗೆ ಅವಶ್ಯವಿರುವ ದಾಖಲೆ ಒದಗಿಸಲು ಸಾಕಷ್ಟು ತೊಂದರೆ ಎದುರಿಸುವ ಸ್ಥಿತಿ ನಿರ್ಮಾಣವಾಗಿದೆ. ಇದಕ್ಕೆ ತಾಲ್ಲೂಕು ಆಡಳಿತ ನೇರ ಹೊಣೆಗಾರರು ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತ ಪಡಿಸಿದರು.
ಸ್ಥಳಕ್ಕೆ ಆಗಮಿಸಿದ ಕಂದಾಯ ಇಲಾಖೆ ಅಧಿಕಾರಿಗಳು ಮನವಿಪತ್ರ ಸ್ವೀಕರಿಸಿ ಇನ್ನೆರಡು ದಿನದಲ್ಲಿ ವ್ಯವಸ್ಥೆ ಸರಿ ಮಾಡುವ ಭರವಸೆ ನೀಡಿದರು.
ಪ್ರತಿಭಟನೆಯಲ್ಲಿ ಧರ್ಮರಾಜ್, ಲೋಕೇಶ್, ರಮೇಶ್, ನಾಗೇಂದ್ರರಾವ್ ಸೇರಿದಂತೆ ಹಲವರು ನೇತೃತ್ವ ವಹಿಸಿದ್ದರು.