ಬೀದರ್: ಪ್ರಮೋದ ಮಹಾಜನ್ ಕ್ರಿಕೆಟ್ ಟ್ರೋಫಿಯನ್ನು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ರಘುನಾಥರಾವ ಮಲ್ಕಾಪುರೆ ನಗರದ ನೆಹರು ಕ್ರೀಡಾಂಗಣದಲ್ಲಿ ಶುಕ್ರವಾರ ಉದ್ಘಾಟಿಸಿದರು.
ಪ್ರಮೋದ ಮಹಾಜನ್ ಯುವಕರಿಗೆ ಮಾದರಿ ಆಗಿದ್ದರು. ಅವರ ಹೆಸರಿನಲ್ಲಿ ಟ್ರೋಫಿ ಆರಂಭಿಸಿರುವುದು ಸೂಕ್ತವಾಗಿದೆ ಎಂದು ಹೇಳಿದರು.
ಪ್ರಮೋದ ಮಹಾಜನ್ ಅವರು ಅಟಲ್ ಬಿಹಾರಿ ವಾಜಪೇಯಿ ಅವರ ಸಂಪುಟದಲ್ಲಿ ದೂರಸಂಪರ್ಕ ಖಾತೆ ಸಚಿವರಾಗಿದ್ದರು. ದೇಶದ ಪ್ರತಿ ಗ್ರಾಮಗಳಿಗೆ ದೂರವಾಣಿ ಮುಟ್ಟಿಸಿದ ಶ್ರೇಯಸ್ಸು ಅವರಿಗೆ ಸಲ್ಲುತ್ತದೆ ಎಂದು ಹೇಳಿದರು.
ಬರುವ ವರ್ಷ ನಡೆಯುವ ಪಂದ್ಯಾವಳಿಯಲ್ಲಿ ವೈಯಕ್ತಿಕವಾಗಿ ವಿಜೇತ ತಂಡಕ್ಕೆ 25 ಸಾವಿರ ರೂಪಾಯಿ, ರನ್ನರ್ ಅಪ್ ತಂಡಕ್ಕೆ 15 ಸಾವಿರ ರೂಪಾಯಿ ಹಾಗೂ ತೃತೀಯ ಸ್ಥಾನ ಗಳಿಸುವ ತಂಡಕ್ಕೆ 10 ಸಾವಿರ ರೂಪಾಯಿ ಬಹುಮಾನ ನೀಡಲಾಗುವುದು ಎಂದು ಪ್ರಕಟಿಸಿದರು.
ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಕುಶಾಲ ಪಾಟೀಲ್ ಗಾದಗಿ, ಬೀದರ್ ಕೃಷಿ ಉತ್ಪನ್ನ ಮಾರುಕಟ್ಟೆ ಅಧ್ಯಕ್ಷ ಶಾಂತಕುಮಾರ ಪನಸಾಲೆ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಾಬುವಾಲಿ, ನಗರ ಘಟಕ ಅಧ್ಯಕ್ಷ ರವಿ ಸ್ವಾಮಿ, ಯುವ ಮೋರ್ಚಾ ನಗರ ಘಟಕದ ಅಧ್ಯಕ್ಷ ಶಿವಕುಮಾರ ಆಣದೂರು, ಪ್ರಧಾನ ಕಾರ್ಯದರ್ಶಿ ಅನಿಲ ಉಪ್ಪೆ, ಪ್ರಮುಖರಾದ ಮಹೇಶ ಪಾಲಂ, ಅನೀಲ ಮೊಟ್ಟಿ, ಅಶೋಕ ಹೊಕ್ರಾಣೆ, ರಾಜು ಬಿರಾದಾರ್, ಶಶಿ ಹೊಸಳ್ಳಿ, ರವಿ ಕೆಂಪಯ್ಯ, ಸುಭಾಷ ಮಡಿವಾಳ್, ಸಂತೋಷ ಚೊಂಡಿ, ಬಸ್ಸು ಚಿದ್ರಿ, ಸಂತೋಷ ಪಾಟೀಲ್, ಶಿವರಾಜ ನಾವದಗೆರಿ, ರಾಜಕುಮಾರ ಪಸಾರೆ ಮತ್ತಿತರರು ಉಪಸ್ಥಿತರಿದ್ದರು. ಪಂದ್ಯಾವಳಿ ಉದ್ಘಾಟನಾ ಸಮಾರಂಭದ ಆಮಂತ್ರಣ ಪತ್ರಿಕೆಯಲ್ಲಿ ಪಕ್ಷದ ಜಿಲ್ಲಾ ಅಧ್ಯಕ್ಷರ ಹೆಸರು ಸೇರಿಸದೇ ಇರುವುದು ಕೆಲವರ ಅಸಮಾಧಾನಕ್ಕೆ ಕಾರಣವಾಗಿತ್ತು.
ಐದು ದಿನಗಳ ಕಾಲ ನಡೆಯಲಿರುವ ಪಂದ್ಯಾವಳಿಯಲ್ಲಿ 12 ತಂಡಗಳು ಪಾಲ್ಗೊಂಡಿವೆ. ವಿಜೇತ ತಂಡಕ್ಕೆ 7 ಸಾವಿರ ರೂಪಾಯಿ ಹಾಗೂ ರನ್ನರ್ ಅಪ್ ತಂಡಕ್ಕೆ 5 ಸಾವಿರ ರೂಪಾಯಿ ಬಹುಮಾನ ದೊರೆಯಲಿದೆ. ಬಿಜೆಪಿ ನಗರ ಘಟಕ ಹಾಗೂ ಯುವ ಮೋರ್ಚಾ ಸಹಯೋಗದಲ್ಲಿ ಪಂದ್ಯಾವಳಿ ಆಯೋಜಿಸಲಾಗಿದೆ.