ಪ್ರಯಾಣಿಕರಿಗೆ ಅನುಕೂಲ ಮಾಡಿ
ಬಿಎಂಟಿಸಿ 30 ಮತ್ತು 11ನೇ ಡಿಪೋದಿಂದ ಹೊರಡುವ ಬಸ್ಸುಗಳ ಚಕ್ರಗಳಿಗೆ ಸಮರ್ಪಕ ಗಾಳಿ ತುಂಬುವುದಿಲ್ಲ. ಸಣ್ಣ ಸಣ್ಣ ಹಳ್ಳ, ಗುಂಡಿ ಬಂದರೂ ಪ್ರಯಾಣಿಕರನ್ನು ಎತ್ತಿ ಹಾಕುತ್ತವೆ. ಸೂಕ್ತ ಕ್ರಮಕೈಗೊಳ್ಳಲು ವಿನಂತಿ.
- ಎಂ. ಮಲ್ಲೇಶಯ್ಯ
ಸಂಚಾರ ಸುಗಮವಾಗಲಿ
ಪಶ್ಚಿಮ ಕಾರ್ಡ್ ರಸ್ತೆಯ ಶಿವನಹಳ್ಳಿ ಗ್ರಾಮದ ತಿಮ್ಮಯ್ಯ ರಸ್ತೆಯಲ್ಲಿ ವಾಹನಗಳನ್ನು ಅಡ್ಡಾದಿಡ್ಡಿ ನಿಲ್ಲಿಸಿರುತ್ತಾರೆ. ಈ ರಸ್ತೆಯಲ್ಲಿ ವಾಹನಗಳನ್ನು ನಿಲುಗಡೆ ಮಾಡುವಾಗ ನಿಯಮ ಪಾಲಿಸುತ್ತಿಲ್ಲ.
ಉದಾ: (2, 4, 6, 8) ಎಂಬ ಫಲಕವಿದ್ದರೂ ವಾಹನ ಮಾಲೀಕರು ಅದನ್ನು ಪಾಲಿಸುತ್ತಿಲ್ಲ. ಆದರೆ ಸದರಿ ವಾಹನ ನಿರೀಕ್ಷಕರು ನೋಡಿಯೂ ಉದಾಸೀನ ಮಾಡುತ್ತಿದ್ದಾರೆ. ತಿಮ್ಮಯ್ಯ ರಸ್ತೆಯಲ್ಲಿ ಪ್ಲೈವುಡ್ ಅಂಗಡಿಗಳು ಇದ್ದು ಅಲ್ಲಿ ಭಾರಿ ವಾಹನಗಳನ್ನು ನಿಲ್ಲಿಸುತ್ತಾರೆ. ಸಾರ್ವಜನಿಕ ವಾಹನ, ಬಸ್ಸು ಮುಂತಾದ ವಾಹನ ಸಂಚಾರಕ್ಕೆ ತೊಂದರೆಯಾಗುತ್ತಿದೆ. ಸಂಬಂಧಪಟ್ಟವರು ಗಮನಿಸಲು ಮನವಿ.
- ಮುನಿರಾಜ್
ಪಾರ್ಕ್ ಉಳಿಸಿ
ಬೆಂಗಳೂರು ನಗರ ಜಯನಗರ ವಿಧಾನಸಭೆ ಕ್ಷೇತ್ರ ಜೆ.ಪಿ.ನಗರ 4ನೇ ಹಂತದಲ್ಲಿರುವ ಡಾಲರ್ ಕಾಲೋನಿಯಲ್ಲಿ ಉದ್ಯಾನಮಂತ್ರಿ ಅಪಾರ್ಟ್ಮೆಂಟ್ ಹತ್ತಿರ ಇರುವ ಪಾರ್ಕ್ನಲ್ಲಿ ಗಿಡಗಳು ನೀರಿಲ್ಲದೆ ಒಣಗುತ್ತಿವೆ. ಬಿಬಿಎಂಪಿ ತೋಟಗಾರಿಕೆ ಇಲಾಖೆಯವರು ಸರಿಯಾಗಿ ನಿರ್ವಹಿಸುತ್ತಿಲ್ಲ. ಗಿಡಗಳು ನೀರಿಲ್ಲದೆ ಒಣಗುತ್ತಿವೆ. ಬೋರ್ವೆಲ್ ಇದ್ದರು ಸಹ ನೀರನ್ನು ಹಾಕುತ್ತಿಲ್ಲ.
ಡಾಲರ್ಸ್ ಕಾಲೋನಿಯ ಚಿನ್ಮಯ ಮಿಷನ್ ಕ್ಲೆರೆನ್ಸ್ ಸ್ಕೂಲ್ ಹಿಂಭಾಗದ ಉದ್ಯಾನದ್ದೂ ಇದೇ ಕತೆ. ಇಲ್ಲಿ ಸ್ಕೇಟಿಂಗ್ ಗ್ರೌಂಡ್ ಮಾಡಿದ್ದಾರೆ.
ಇದರ ಬಗ್ಗೆ ಬಿಬಿಎಂಪಿ ಅಧಿಕಾರಿಗಳು ಗಮನಹರಿಸಿಲ್ಲ. ಜಾನುವಾರುಗಳು ಬಂದು ಮಲಗುವುದರಿಂದ ತಿಪ್ಪೆಗುಂಡಿಯಂತೆ ಆಗಿದೆ. ಸರಿಯಾಗಿ ಗೇಟ್ ಹಾಕಬೇಕು. ಉದ್ಯಾನವನ್ನು ಉಳಿಸಿ ಎಂದು ಬಿಬಿಎಂಪಿ ಆಯುಕ್ತರಿಗೆ ಮನವಿ ಮಾಡಿಕೊಳ್ಳುತ್ತೇನೆ.
-ಅ.ನ. ನಾಗರಾಜಯ್ಯ