ಯಾದಗಿರಿ: ಶಹಾಪುರದಿಂದ ಯಾದಗಿರಿಯತ್ತ ಬರುವ ವಾಹನಗಳು ಗುಂಡಳ್ಳಿಯ ಕೆರೆಯನ್ನು ದಾಟಿದೊಡನೆ ತಂಪಾದ ವಾತಾವರಣದಲ್ಲಿ ಹಾದು ಹೋಗುತ್ತವೆ. ಒಂದು ರೀತಿಯಲ್ಲಿ ರೈಲು ಸುರಂಗಮಾರ್ಗದಲ್ಲಿ ಸಂಚರಿಸಿದಂತಹ ಅನುಭವ ಆಗುತ್ತದೆ. ಒಂದೆರಡು ಕ್ಷಣ ಸೂರ್ಯನ ಕಿರಣಗಳೂ ಕಾಣಲು ಸಿಗುವುದಿಲ್ಲ.
ಶಹಾಪುರ–ಯಾದಗಿರಿ ರಾಜ್ಯ ಹೆದ್ದಾರಿಯ ಗುಂಡಳ್ಳಿ ಬಳಿ ರಸ್ತೆಯ ಇಕ್ಕೆಲಗಳಲ್ಲಿರುವ ಸಾಲು ಮರಗಳು ತಂಪಾದ ವಾತಾವರಣ ನಿರ್ಮಿಸಿವೆ. ರಸ್ತೆಯ ಎರಡು ಬದಿಗಳಲ್ಲಿ ಛತ್ರಿಯಾಕಾರದಲ್ಲಿ ಮರಗಳು ಬೆಳೆದಿದ್ದು, ಸೂರ್ಯನ ಕಿರಣಗಳನ್ನು ಭೂಮಿಗೆ ಸ್ಪರ್ಶಿಸದಂತೆ ತಡೆಯೊಡ್ಡಿರುವ ಈ ಮನಮೋಹಕ ದೃಶ್ಯ ಕಣ್ಮನ ಸೆಳೆಯುತ್ತದೆ.
ಗುಂಡಳ್ಳಿ ತಾಂಡಾದ ಬಳಿ ಸೀಮೆ ಮರೆಮ್ಮನ ದೇವಸ್ಥಾನವಿದೆ. ಪ್ರತಿಯೊಂದು ದೇವಸ್ಥಾನದ ಎದುರು ಅಥವಾ ಪಕ್ಕದಲ್ಲಿ ಕೆಲವೊಂದು ಗಿಡಗಳನ್ನು ಅಥವಾ ಸಸಿಗಳನ್ನು ಹಾಕಿರುವುದು ಕಾಣಬಹುದು. ಆದರೆ, ರಾಜ್ಯ ಹೆದ್ದಾರಿಯ ಮೇಲೆ ಇರುವ ಈ ದೇವಸ್ಥಾನದ ಪಕ್ಕದಲ್ಲಿ ನೂರಾರು ಮರಗಳು ಭಕ್ತರನ್ನು ಸ್ವಾಗತಿಸುವ ರೀತಿಯಲ್ಲಿ ಸಾಲಾಗಿ ನಿಂತಿವೆ.
ಶಹಾಪುರ– -ಯಾದಗಿರಿ ಹೆದ್ದಾರಿಯ ವಿಸ್ತಾರದ ಸಮಯದಲ್ಲಿ ಕೆಲವು ಮರಗಳನ್ನು ಕಡಿದು ಹಾಕಲಾಗಿದೆ. ಇನ್ನೂ ಅನೇಕ ಗಿಡಗಳಿದ್ದು, ವರ್ಷದ 12 ತಿಂಗಳು ಪ್ರಯಾಣಿಕರು, ದಾರಿಹೋಕರು, ಭಕ್ತರು, ವಾಹನ ಚಾಲಕರನ್ನು ಬಿಸಿಲು, ಮಳೆಯಿಂದ ರಕ್ಷಿಸುತ್ತಿವೆ. ಬೆಳಗಾವಿ, ಹುಬ್ಬಳ್ಳಿ, ಗೋವಾ, ಮೀರಜ ಹಾಗೂ ಇನ್ನಿತರ ನಗರಗಳಿಂದ ಸರಕುಗಳನ್ನು ತುಂಬಿಕೊಂಡು ಆಂಧ್ರಪ್ರದೇಶದ ರಾಜಧಾನಿ ಹೈದರಾಬಾದ್ಗೆ ಇದೇ ರಸ್ತೆಯ ಮೂಲಕ ಹಾದು ಹೋಗಬೇಕು. ದೂರದ ಪ್ರಯಾಣದಿಂದ ಬಂದ ಲಾರಿ ಚಾಲಕರು, ದಣಿವಾರಿಸಿಕೊಳ್ಳಲು ತಮ್ಮ ಲಾರಿಗಳನ್ನು ರಸ್ತೆ ಬದಿಯಲ್ಲಿ ಸಾಲಾಗಿ ನಿಲ್ಲಿಸಿ ಈ ಮರಗಳ ನೆರಳಿನಲ್ಲಿ ಹಾಯಾಗಿ ನಿದ್ದೆ ಮಾಡುತ್ತಾರೆ.
ಖಾಸಗಿ ವಾಹನಗಳಲ್ಲಿ ಕುಟುಂಬ ಸಮೇತ ಪ್ರಯಾಣಿಸುವ ಜನರು, ಇಲ್ಲಿ ವಾಹನವನ್ನು ನಿಲ್ಲಿಸಿ ದೇವಿಯ ದರ್ಶನ ಪಡೆದು ತಾವು ತಂದ ತಿಂಡಿ ಅಥವಾ ಬುತ್ತಿಯನ್ನು ಊಟ ಮಾಡಿ, ಪಕ್ಕದಲ್ಲಿಯೇ ಇರುವ ಕೊಳವೆಬಾವಿಯಲ್ಲಿ ನೀರು ಕುಡಿದು ತಂಪಾಗಿ ಬೀಸುವ ಗಾಳಿಗೆ ಮೈಯೊಡ್ಡುತ್ತಾರೆ.
ಬೇಸಿಗೆಯಲ್ಲಂತೂ ಈ ಗಿಡಗಳಿಂದ ತಂಪಾದ ಗಾಳಿ ಬೀಸುವುದರಿಂದ ಅನೇಕ ಜನರು ಗಿಡಗಳ ಕೆಳಗೆ ನಿದ್ರೆಗೆ ಜಾರಿರುವ ದೃಶ್ಯ ಸಾಮಾನ್ಯವಾಗಿರುತ್ತದೆ. ಜೊತೆಗೆ ಇಲ್ಲಿ ವಾಹನಗಳನ್ನೂ ನಿಲ್ಲಿಸಲು ಸ್ಥಳ ಸಿಗುವುದು ಅಸಾಧ್ಯವಾಗುತ್ತದೆ.
ಈ ದೇವಿಯ ದರ್ಶನಕ್ಕೆ ನಿತ್ಯ ನೂರಾರು ಭಕ್ತರು ಬಂದು. ಈ ಮರಗಳ ಆಶ್ರಯದಲ್ಲಿ ದಣಿವಾರಿಸಿಕೊಂಡು ಮನೆಗೆ ಮರಳುತ್ತಾರೆ. ಈ ಗಿಡಗಳ ಬಗ್ಗೆ ತಾಂಡಾದ ನಿವಾಸಿಯೊಬ್ಬರನ್ನು ಕೇಳಿದರೆ, ‘ಈ ಮರಗಳು ಸುಮಾರು ನೂರು ವರ್ಷಗಳಷ್ಟು ಹಳೆಯದಾಗಿವೆ’ ಎಂದು ಹೇಳುತ್ತಾರೆ.
‘ಕಳೆದ ಹದಿನೈದು ವರ್ಷದಿಂದ ಈ ಭಾಗದಲ್ಲಿ ಲಾರಿ ಓಡಿಸುತ್ತಿದ್ದೇನೆ. ನಾನು ಇಲ್ಲಿ ಲಾರಿಯನ್ನು ನಿಲ್ಲಿಸಿ, ವಿಶ್ರಾಂತಿ ಪಡೆದ ನಂತರವೇ ಹೈದರಾಬಾದ್ಗೆ ಹೋಗುತ್ತೇನೆ’ ಎಂದು ಲಾರಿ ಚಾಲಕ ಮಹ್ಮದ್ ಶಫೀ ಹೇಳುತ್ತಾರೆ.
ಅರಣ್ಯ ಇಲಾಖೆ ಈ ಮರಗಳನ್ನು ಸಂರಕ್ಷಣೆ ಮಾಡಬೇಕು. ರಸ್ತೆಯ ಇಕ್ಕೆಲಗಳಲ್ಲಿ ಜನರು ವಿಶ್ರಾಂತಿ ಪಡೆಯಲು ಸೂಕ್ತ ವ್ಯವಸ್ಥೆ ಮಾಡಬೇಕು ಎಂಬುದು ಭಕ್ತರ ಆಗ್ರಹವಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.