ಕೊಲಂಬೊ (ಡಿಪಿಎ): ಶ್ರೀಲಂಕಾದ ಈಶಾನ್ಯ ಮತ್ತು ಉತ್ತರ ಕೇಂದ್ರ ಭಾಗಗಳಲ್ಲಿ ಪ್ರವಾಹ ಪರಿಸ್ಥಿತಿ ಉಲ್ಬಣವಾಗಿದ್ದು, ನೆರೆಗೆ ಸಿಲುಕಿ ಮೃತಪಟ್ಟವರ ಸಂಖ್ಯೆ ಶನಿವಾರ 13ಕ್ಕೆ ಏರಿದೆ. ಇದುವರೆಗೆ ಸುಮಾರು 80 ಸಾವಿರ ಜನರನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಲಾಗಿದೆ ಎಂದು ಅಲ್ಲಿನ ವಿಪತ್ತು ನಿರ್ವಹಣಾ ಕೇಂದ್ರ ತಿಳಿಸಿದೆ.
ಕೊಲಂಬೊದಿಂದ 180 ಕಿ.ಮೀ. ದೂರದಲ್ಲಿರುವ ಬೌದ್ಧ ದೇವಾಲಯಗಳಿರುವ ಪ್ರವಾಸಿ ಸ್ಥಳ ಅನುರಾಧಾಪುರಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗಳು ನೀರಿನಿಂದ ಆವೃತವಾಗಿದ್ದು ಅದನ್ನು ಪ್ರವಾಸಿಗರ ಭೇಟಿಗೆ ಅಸುರಕ್ಷಿತ ಸ್ಥಳವೆಂದು ಘೋಷಿಸಲಾಗಿದೆ.