ಶಿವಮೊಗ್ಗ: ನಗರದ ಸಾಹಸಿ ಅ.ನಾ.ವಿಜಯೇಂದ್ರರಾವ್ ಈಚೆಗೆ ಸುರಿಯುವ ಮಳೆಯಲ್ಲಿ, ಪ್ರವಾಹದ ಅಲೆಯಲ್ಲಿ ತುಂಗಾ ನದಿಯಲ್ಲಿ ಕೆಲಕಾಲ ತೇಲಿದರು.
ನಗರದ ಬೈಪಾಸ್ ರಸ್ತೆ ಸೇತುವೆ ಬಳಿಯಿಂದ ಗಾಳಿ ತುಂಬಿದ ಟ್ಯೂಬ್ನಲ್ಲಿ ತೇಲಿ ಬಂದ ಅವರು, ಬೆಕ್ಕಿನಕಲ್ಮಠದ ಬಳಿ ದಡ ಹತ್ತಿದರು.
`ಹಿಂದಿಗಿಂತ ಈ ಬಾರಿ ತುಂಗೆ ರಭಸದಿಂದ ಹರಿಯುತ್ತಿದ್ದು, ನದಿಯ ದಡದ ಪಕ್ಕದಲ್ಲಿ ವಾಸಿಸುವ ಜನರು ಈಗಲೇ ಎಚ್ಚರಿಕೆ ವಹಿಸಿದರೆ ಒಳ್ಳೆಯದು. ನೀರಿನ ಸೆಳೆತಕ್ಕೆ ಈ ಬಾರಿ ಹೊಸ ಸೇತುವೆಯಿಂದ ಮಂಟಪಕ್ಕೆ ಬರಲಾಗದೆ ಬೆಕ್ಕಿನಕಲ್ಮಠಕ್ಕೆ ಹೋಗಿ ದಡ ಸೇರಬೇಕಾಯಿತು' ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
`ನದಿಪಾತ್ರದಲ್ಲಿ ಅತಿಯಾದ ಮರಳುಗಾರಿಕೆ ಮಾಡಿರುವುದು. ಅಲ್ಲಿರುವ ಬಂಡೆಕಲ್ಲುಗಳನ್ನು ಸ್ಫೋಟಿಸಿರುವುದರಿಂದ ನದಿ ಈಗ ಬಹಳ ವೇಗವಾಗಿ ಹರಿಯುತ್ತಿದೆ. ನದಿಗೆ ಯಾರೇ ಇಳಿಯಬೇಕಾದರೆ ಸುರಕ್ಷಿತ ಕ್ರಮಗಳನ್ನು ಕೈಗೊಂಡೇ ಇಳಿಯಬೇಕು. ಈ ಬಗ್ಗೆ ಜಾಗೃತಿ ಮೂಡಿಸುವ ದೃಷ್ಟಿಯಿಂದ ಈ ಬಾರಿ ತೇಲಿ ಬಂದೆ' ಎನ್ನುತ್ತಾರೆ ಅವರು.