ಲಂಡನ್ (ಪಿಟಿಐ): ಆಂಧ್ರ ಪ್ರದೇಶದ ವಿದ್ಯಾರ್ಥಿ ಪ್ರವೀಣ್ ರೆಡ್ಡಿ ಅವರ ಮೇಲೆ ಇಲ್ಲಿ ನಡೆದಿರುವ ತೀವ್ರ ದಾಳಿಗೆ ಅದೇ ರಾಜ್ಯದ ಎರಡು ಗುಂಪುಗಳ ನಡುವಿನ ಜಗಳ ಕಾರಣ ಎಂದು ಹೇಳಲಾಗಿದೆ. ಈ ಘಟನೆಗೆ ಕೆಲ ಹೊತ್ತಿನ ಮೊದಲು ಪ್ರವೀಣ್ ತಮ್ಮ ಅಪಾರ್ಟ್ಮೆಂಟ್ನಲ್ಲಿ ಸ್ನೇಹಿತರ ಜೊತೆ ತಡರಾತ್ರಿಯವರೆಗೂ ಪಾರ್ಟಿ ನಡೆಸಿದ್ದರು ಎಂದು ಪ್ರಾಥಮಿಕ ವರದಿ ತಿಳಿಸಿದೆ.
ಈ ನಡುವೆ, ಪೊಲೀಸರು ಬಂಧಿಸಿರುವ 11 ಮಂದಿಯಲ್ಲಿ ಅಮರೇಶ್ವರ್ ಅರವ (25), ಸಾಯಿ ಕಿಶೋರ್ ಬಲಗುರಿ (25) ಮತ್ತು ನಿಶಾಂತ್ ಪುಟ್ಟಪಾಕ (23) ಎಂಬ ಮೂವರು ಭಾರತೀಯ ವಿದ್ಯಾರ್ಥಿಗಳ ಮೇಲೆ, ಪ್ರವೀಣ್ ಅವರ ಕೊಲೆಗೆ ಯತ್ನಿಸಿದ ಆರೋಪ ಹೊರಿಸಲಾಗಿದೆ.
ಪ್ರವೀಣ್ ಕುತ್ತಿಗೆ, ಎದೆ, ಹೊಟ್ಟೆಗೆ ಅನೇಕ ಬಾರಿ ಇರಿಯಲಾಗಿದೆಯಲ್ಲದೆ, ಹ್ಯಾಂಪ್ಶೈರ್ ಕೌಂಟಿಯಲ್ಲಿರುವ ಅಪಾರ್ಟ್ಮೆಂಟ್ನಿಂದ ಅವರನ್ನು ಎತ್ತಿ ಹೊರಗೆಸೆಯಲಾಗಿತ್ತು ಎಂದು `ಡೈಲಿ ಮೇಲ್~ ಭಾನುವಾರ ವರದಿ ಮಾಡಿದೆ.
ಗಂಭೀರವಾಗಿ ಗಾಯಗೊಂಡಿರುವ ಅವರು ರಾಯಲ್ ಲಂಡನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರ ಸ್ಥಿತಿ ಶನಿವಾರಕ್ಕಿಂತ ಉತ್ತಮವಾಗಿದ್ದು, ಇನ್ನೊಂದು ಶಸ್ತ್ರಚಿಕಿತ್ಸೆಯ ಅಗತ್ಯವಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಪ್ರವೀಣ್ ಹೈದರಾಬಾದ್ನ ರಿಯಲ್ ಎಸ್ಟೇಟ್ ಉದ್ಯಮಿ ಸುಧಾಕರ ರೆಡ್ಡಿ ಅವರ ಕಿರಿಯ ಪುತ್ರ. ತಮ್ಮ ತಂದೆ ಸುಧಾಕರ ರೆಡ್ಡಿ ಾಗೂ ಚಿಕ್ಕಪ್ಪ ಲಂಡನ್ಗೆ ತೆರಳಿದ್ದಾರೆ ಎಂದು ಪ್ರವೀಣ್ ಸಹೋದರ ಜಯಶಂಕರ ರೆಡ್ಡಿ ಅವರು ಹೈದರಾಬಾದ್ನಿಂದ ಮಾಹಿತಿ ನೀಡಿದ್ದಾರೆ.