ಶಿವಮೊಗ್ಗ:ಇಲ್ಲಿನ ಕರ್ನಾಟಕ ಸಂಘವು 2010ನೇ ಸಾಲಿನಲ್ಲಿ ಪ್ರಕಟಗೊಂಡ ಕನ್ನಡ ಪುಸ್ತಕಗಳಿಗೆ ಬಹುಮಾನ ನೀಡಲು ಲೇಖಕರು ಮತ್ತು ಪ್ರಕಾಶಕರಿಂದ ಕೃತಿಗಳನ್ನು ಆಹ್ವಾನಿಸಿದೆ.
ಕಾದಂಬರಿಗೆ ಕುವೆಂಪು ಪ್ರಶಸ್ತಿ, ಅನುವಾದಿತ ಕೃತಿಗೆ ಎಸ್.ವಿ. ಪರಮೇಶ್ವರ ಭಟ್ಟ, ಮಹಿಳಾ ಸಾಹಿತ್ಯಕ್ಕೆ ಎಂ.ಕೆ. ಇಂದಿರಾ, ಮುಸ್ಲಿಂ ಬರಹಗಾರರ ಕೃತಿಗಳಿಗೆ ಪಿ. ಲಂಕೇಶ್, ಕವನ ಸಂಕಲನಕ್ಕೆ ಡಾ.ಜಿ.ಎಸ್. ಶಿವರುದ್ರಪ್ಪ, ಅಂಕಣ ಬರಹಗಾರರಿಗೆ ಡಾ.ಹಾ.ಮಾ. ನಾಯಕ, ಸಣ್ಣ ಕಥಾ ಸಂಕಲನಕ್ಕೆ ಡಾ.ಯು.ಆರ್. ಅನಂತಮೂರ್ತಿ, ನಾಟಕ ಕೃತಿಗೆ ಕೆ.ವಿ. ಸುಬ್ಬಣ್ಣ, ಪ್ರವಾಸ ಸಾಹಿತ್ಯಕ್ಕೆ ಕುಕ್ಕೆ ಸುಬ್ರಹ್ಮಣ್ಯಶಾಸ್ತ್ರಿ, ವಿಜ್ಞಾನ ಸಾಹಿತ್ಯಕ್ಕೆ ಹಸೂಡಿ ವೆಂಕಟಶಾಸ್ತ್ರಿ, ಮಕ್ಕಳ ಸಾಹಿತ್ಯಕ್ಕೆ ಡಾ.ನಾ. ಡಿಸೋಜ ಹಾಗೂ ವೈದ್ಯ ಸಾಹಿತ್ಯಕ್ಕೆ ಡಾ.ಎಚ್.ಡಿ. ಚಂದ್ರಪ್ಪಗೌಡ ಪ್ರಶಸ್ತಿ ನೀಡಲಾಗುವುದು. ಅತ್ಯುತ್ತಮ ಕೃತಿಗೆ 5ಸಾವಿರ ನಗದು ಮತ್ತು ಬಹುಮಾನ ಪತ್ರ ನೀಡಲಾಗುವುದು. ವಿವಿಧ ಪ್ರಕಾರಗಳ ಸಾಹಿತ್ಯ ಕೃತಿಗಳ ಪ್ರತಿಗಳನ್ನು ಇದೇ ಮಾರ್ಚ್ 30ರ ಒಳಗೆ ಗೌರವ ಕಾರ್ಯದರ್ಶಿ, ಕರ್ನಾಟಕ ಸಂಘ, ಬಿ.ಎಚ್. ರಸ್ತೆ, ಶಿವಮೊಗ್ಗ- 577201. ಇಲ್ಲಿಗೆ ಕಳುಹಿಸಬಹುದು ಎಂದು ಸಂಘದ ಗೌರವ ಕಾರ್ಯದರ್ಶಿ ಎಚ್.ಡಿ. ಉದಯಶಂಕರ ಶಾಸ್ತ್ರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮರು ಮುದ್ರಣಗೊಂಡ ಕೃತಿಗಳು ಹಾಗೂ ಹಸ್ತಪ್ರತಿಗಳಿಗೆ ಅವಕಾಶವಿಲ್ಲ. ಸಂಘದಿಂದ ಬಹುಮಾನ ಪಡೆದವರು ಪುನಃ ಸ್ಪರ್ಧೆಗೆ ಭಾಗವಹಿಸುವಂತಿಲ್ಲ. ಬಹುಮಾನಕ್ಕೆ ಪುಸ್ತಕ ಕಳುಹಿಸಬಹುದು ಎಂದೂ ಅವರು ಹೇಳಿದ್ದಾರೆ. ವಿವರಕ್ಕೆ ದೂ: 08182- 277406 ಸಂಪರ್ಕಿಸಬಹುದು.