ಬೆಂಗಳೂರು: ವಿಧಾನಮಂಡಲದ ಜಂಟಿ ಅಧಿವೇಶನ ಸೋಮವಾರ (ಜೂ.3) ನಡೆಯಲಿದೆ. ಶುಕ್ರವಾರದವರೆಗೂ ಅಧಿವೇಶನ ನಡೆಯಲಿದ್ದು, ಈ ಬಾರಿ ಪ್ರಶ್ನೋತ್ತರ ಕಲಾಪ ಇರುವುದಿಲ್ಲ ಎಂದು ವಿಧಾನ ಪರಿಷತ್ತಿನ ಸಭಾಪತಿ ಡಿ.ಎಚ್.ಶಂಕರಮೂರ್ತಿ ಹೇಳಿದರು.
ನಾಲ್ಕು ದಿನವೂ ರಾಜ್ಯಪಾಲರ ಭಾಷಣದ ಮೇಲೆ ಚರ್ಚೆ ನಡೆಯಲಿದೆ. ಇದರ ನಡುವೆ ಗಮನ ಸೆಳೆಯುವ ಸೂಚನೆ ಮತ್ತು ಶೂನ್ಯ ವೇಳೆ ಇರುತ್ತದೆ. ಈವರೆಗೆ 42 ಗಮನ ಸೆಳೆಯುವ ಸೂಚನೆಗಳು ಬಂದಿವೆ ಎಂದು ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ರಾಜ್ಯ ಭೂ ಕಂದಾಯ (2ನೇ ತಿದ್ದುಪಡಿ) ಮಸೂದೆ-2012 ರಾಜ್ಯಪಾಲರಿಂದ ಅಂಗೀಕಾರವಾಗದೆ ವಾಪಸ್ ಬಂದಿದೆ. ಅದನ್ನು ರಾಜ್ಯ ಸರ್ಕಾರಕ್ಕೂ ಕಳುಹಿಸಲಾಗಿದೆ. ಸರ್ಕಾರ ಇಚ್ಛೆಪಟ್ಟಲ್ಲಿ ಅದನ್ನು ಪುನಃ ಸದನದಲ್ಲಿ ಮಂಡಿಸಬಹುದು. ಅದು ಬಿಟ್ಟು ಇತರೆ ಮಸೂದೆಗಳು ಇದ್ದರೂ ಅವುಗಳನ್ನು ಮಂಡಿಸಬಹುದು ಎಂದು ಅವರು ಹೇಳಿದರು.