ಬೆಂಗಳೂರು: ‘ಗಣೇಶ ಮೂರ್ತಿ ವಿಸರ್ಜನೆ ವೇಳೆ ಪ್ರಸಾದ ಸ್ವೀಕರಿಸಿದ್ದ 26ಕ್ಕೂ ಅಧಿಕ ಮಂದಿ ಅಸ್ವಸ್ಥಗೊಂಡಿರುವ ಘಟನೆ ಪುಲಿಕೇಶಿ ನಗರದಲ್ಲಿ ಬುಧವಾರ ಸಂಜೆ ನಡೆದಿದೆ.
ಅಸ್ವಸ್ಥಗೊಂಡಿರುವವರನ್ನು ನಗರದ ಬೌರಿಂಗ್ ಮತ್ತು ಲೇಡಿ ಕರ್ಜನ್ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಿಸಲಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಘಟನೆ: ಪುಲಿಕೇಶಿ ನಗರದ ಬೆಸ್ಕಾಂ ಕಚೇರಿ ಆವರಣದಲ್ಲಿ ಗಣೇಶೋತ್ಸವ ನಡೆಸಲಾಗಿತ್ತು. ಅದರ ವಿಸರ್ಜನಾ ಕಾರ್ಯಕ್ರಮದ ಪ್ರಯುಕ್ತ ಪುಳಿಯೊಗರೆ, ಪಾಯಸವನ್ನು ಭಕ್ತರಿಗೆ ಹಂಚಿ, ಉಳಿದ ಪ್ರಸಾದವನ್ನು ಲೇಜರ್ ರಸ್ತೆಯಲ್ಲಿರುವ ಕೊಳೆಗೇರಿಗಳಿಗೆ ನೀಡಲಾಯಿತು. ಇದನ್ನು ಸೇವಿಸಿದ 26 ಮಂದಿ ವಾಂತಿ ಭೇದಿಯಿಂದ ಅಸ್ವಸ್ಥರಾದರು. ಅಸ್ವಸ್ಥರ ಪೈಕಿ 21 ಮಂದಿ ಮಕ್ಕಳಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ.
‘ಪಾಯಸ ಸೇವಿಸಿದ್ದರಿಂದ ವಾಂತಿ ಹಾಗೂ ಭೇದಿಯಾಗಿದೆ. ಕೆಲವರು ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಲು ಮುಂದಾಗಿದ್ದು, ವಿಷಯುಕ್ತ ಆಹಾರ ಸೇವನೆಯಿಂದ ಹೀಗಾಗಿದೆ ಎಂಬುದು ದೃಢಪಟ್ಟಿದೆ’ ಎಂದು ಅಸ್ವಸ್ಥಗೊಂಡ ನಿವಾಸಿ ಆರತಿ ‘ಪ್ರಜಾವಾಣಿ’ಗೆ ತಿಳಿಸಿದರು.
‘ಪಾಯಸ ಸೇವಿಸಿದ ತಕ್ಷಣವೇ ಹೊಟ್ಟೆನೋವಿನಿಂದ ಬಳಲುವಂತಾಯಿತು. ಇದರಿಂದ ಮನೆ ಮಂದಿಯೆಲ್ಲ ಅಸ್ವಸ್ಥರಾದರು’ ಎಂದು ಮುರುಗನ್ ಹೇಳಿದರು. ಬೌರಿಂಗ್ ಆಸ್ಪತ್ರೆಯ ಸ್ಥಾನಿಕ ವೈದ್ಯ ಅಧಿಕಾರಿ ಡಾ.ರಾಜಣ್ಣ, ‘ಸಿದ್ಧಪಡಿಸಿ ಹಲವು ಗಂಟೆಗಳ ನಂತರ ಪ್ರಸಾದ ಹಂಚಿರುವುದರಿಂದ ಅಸ್ವಸ್ಥತೆಯಾಗಿರಬಹುದು. ಅಲ್ಲದೇ ಬಹುತೇಕ ಯುವಕರಿಗೆ ರಕ್ತದೊತ್ತಡ ಅಸಹಜವಾಗಿದೆ’ ಎಂದು ತಿಳಿಸಿದರು.
‘ಅಸ್ವಸ್ಥರಾಗಿ ದಾಖಲಾಗಿರುವವರ ಪ್ರಾಣಾಪಾಯಕ್ಕೆ ಯಾವುದೇ ತೊಂದರೆಯಿಲ್ಲ’ ಎಂದರು.
ನಿರ್ಲಕ್ಷ್ಯ ಆರೋಪದ ಮೇಲೆ ಬೆಸ್ಕಾಂ ಅಧಿಕಾರಿಗಳ ವಿರುದ್ಧ ಪುಲಿಕೇಶಿ ನಗರದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹಂಚಲಾದ ಪ್ರಸಾದವನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.