ಬೆಂಗಳೂರು: `ರಾಜ್ಯದ ಬಿಜೆಪಿ ಸರ್ಕಾರ ತನ್ನ ವರ್ತನೆಯ ಮೂಲಕ ಜನತೆಗೆ ಉಚಿತ ಮನರಂಜನೆ ನೀಡುವ ಬದಲು ವಿಧಾನಸಭೆ ವಿಸರ್ಜಿಸಿ, ಹೊಸದಾಗಿ ಜನಾದೇಶ ಪಡೆಯುವುದು ಒಳಿತು~ ಎಂದು ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕ ಎಸ್.ಆರ್. ಪಾಟೀಲ್ ಸಲಹೆ ಮಾಡಿದರು.
ರಾಜ್ಯದ ಬಹುತೇಕ ಭಾಗಗಳಲ್ಲಿ ಬರ ಪರಿಸ್ಥಿತಿ ಇದೆ. ಇಂಥ ಸಂದರ್ಭದಲ್ಲೇ ಸರ್ಕಾರದ ಒಂಬತ್ತು ಸಚಿವರು ತಮ್ಮ ಸ್ಥಾನಗಳಿಗೆ ರಾಜೀನಾಮೆ ಸಲ್ಲಿಸಿದರು. ಈಗ ಅದನ್ನು ವಾಪಸು ಪಡೆದಿದ್ದಾರೆ. ಇದೊಂದು ಪ್ರಹಸನದಂತೆ ಕಾಣುತ್ತಿದೆ. ಆಡಳಿತ ವ್ಯವಸ್ಥೆ ಕೋಮಾ ಸ್ಥಿತಿಯಲ್ಲಿದೆ ಎಂದು ಅವರು ವಿಧಾನಸೌಧದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಟೀಕಿಸಿದರು.
ಬರ ಪರಿಹಾರ ಕಾಮಗಾರಿಗಳಿಗೆ ಕೇಂದ್ರ ಸರ್ಕಾರ ಅಗತ್ಯ ನೆರವು ನೀಡುತ್ತಿಲ್ಲ ಎಂದು ರಾಜ್ಯ ಸರ್ಕಾರ ಆರೋಪಿಸುತ್ತಿದೆ. ಆದರೆ ವಿವಿಧ ಯೋಜನೆಗಳಿಗೆ ಕೇಂದ್ರ ಇದುವರೆಗೆ ನೀಡಿದ ಅನುದಾನವನ್ನೇ ರಾಜ್ಯ ಸರ್ಕಾರ ಸಮರ್ಪಕವಾಗಿ ಬಳಸಿಕೊಂಡಿಲ್ಲ. 2011-12ನೇ ಸಾಲಿನಲ್ಲಿ ಕೇಂದ್ರ, ಕುಡಿಯುವ ನೀರು ಪೂರೈಕೆಗೆ ರಾಜ್ಯಕ್ಕೆ ರೂ 1,500 ಕೋಟಿ ನೀಡಿತ್ತು. ಅದರಲ್ಲಿ ಕೇವಲ ರೂ 1,100 ಖರ್ಚು ಮಾಡಲಾಗಿದೆ. ಬರ ನಿರ್ವಹಣೆಯಲ್ಲೂ ಸರ್ಕಾರ ವಿಫಲವಾಗಿದೆ ಎಂದು ದೂರಿದರು.
ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯ ಅಡಿ 2011-12ನೇ ಸಾಲಿನಲ್ಲಿ ನೀಡಲಾದ 2,930 ಕೋಟಿ ರೂಪಾಯಿಯಲ್ಲಿ 2,158 ಕೋಟಿ ರೂಪಾಯಿ ಮಾತ್ರ ಬಳಕೆಯಾಗಿದೆ ಎಂದು ವಿವರಿಸಿದರು.
`ವೇತನ ಬೇಡ~: ರಾಜ್ಯದಲ್ಲಿ ಬರದ ತೀವ್ರತೆ ಕಡಿಮೆ ಆಗುವವರೆಗೆ ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕರಿಗೆ ನೀಡುವ ವೇತನ ಪಡೆಯಲಾರೆ. ಅದನ್ನು ಬರ ನಿರ್ವಹಣೆಗೆ ಬಳಸಿಕೊಳ್ಳಲು ಸರ್ಕಾರಕ್ಕೇ ಮರಳಿಸುವೆ ಎಂದು ತಿಳಿಸಿದರು. ಪರಿಷತ್ ಸದಸ್ಯರಾದ ಆರ್.ವಿ. ವೆಂಕಟೇಶ್, ಕೆ. ಗೋವಿಂದರಾಜು, ಗಾಯತ್ರಿ ಶಾಂತೇಗೌಡ ಮತ್ತಿತರರು ಉಪಸ್ಥಿತರಿದ್ದರು.