ಬೆಂಗಳೂರು: `ಒಂದು ಸಂಸ್ಥೆಯನ್ನು ನಿರ್ವಹಿಸುವ ಜವಾಬ್ದಾರಿಯು ಪ್ರಾಂಶುಪಾಲರ ಮೇಲಿರುತ್ತದೆ. ಅವರು ನಿರ್ವಹಿಸುವ ಕೆಲಸದ ಆಧಾರದ ಮೇಲೆ ಆ ಸಂಸ್ಥೆಯ ಏಳಿಗೆ ಅವಲಂಬಿಸಿರುತ್ತದೆ~ ಎಂದು ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಬಿ.ಆರ್.ಅನಂತನ್ ಹೇಳಿದರು.
ನಗರದ ಕರ್ನಾಟಕ ರಾಜ್ಯ ಉನ್ನತ ಪರಿಷತ್ತಿನ ಸಭಾಂಗಣದಲ್ಲಿ ನಡೆದ ಹೊಸದಾಗಿ ನೇಮಕವಾಗಿರುವ ಸರ್ಕಾರಿ ಮತ್ತು ಅನುದಾನಿತ ಪದವಿ ಕಾಲೇಜುಗಳ ಪ್ರಾಚಾರ್ಯರ ಒಂದು ದಿನದ ತರಬೇತಿ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.
`ಪ್ರಾಂಶುಪಾಲರ ಕ್ರಿಯಾಶೀಲತೆ ಒಂದು ಸಂಸ್ಥೆಯ ಆಧಾರ. ಅವರ ಮೇಲೆ ಸಮುದಾಯ ಮತ್ತು ಸಮಾಜದ ನಿರೀಕ್ಷೆಗಳು ತುಂಬಾ ಇರುತ್ತವೆ. ಏನೇ ನಡೆದರೂ ಅದಕ್ಕೆ ಇಡೀ ಸಮುದಾಯಕ್ಕೆ ಉತ್ತರ ನೀಡಬೇಕಾದವರು ಪ್ರಾಂಶುಪಾಲರು. ಅವರ ಮೇಲೆ ಇಡೀ ಸಂಸ್ಥೆ ಅಷ್ಟೆ ಅಲ್ಲ ಬದಲಿಗೆ ಇಡೀ ಸಮುದಾಯ, ಸಮಾಜ ನಿಂತಿರುತ್ತದೆ~ ಎಂದು ಹೇಳಿದರು.
ಒಂದು ದಿನದ ಕಾರ್ಯಾಗಾರದಲ್ಲಿ ರಾಜ್ಯದ ಎಲ್ಲ ವಿಶ್ವವಿದ್ಯಾಲಯಗಳ ಪ್ರಾಂಶುಪಾಲರು ಆಗಮಿಸಿದ್ದಾರೆ. ಕುವೆಂಪು, ದಾವಣಗೆರೆ, ಬೆಂಗಳೂರು, ಮಂಗಳೂರು, ತುಮಕೂರು, ಮೈಸೂರು ಇನ್ನೂ ಹಲವಾರು ವಿಶ್ವವಿದ್ಯಾಲಯಗಳ ಪ್ರಾಂಶುಪಾಲರು ತರಬೇತಿ ಕಾರ್ಯಾಗಾರದಲ್ಲಿ ಭಾಗವಹಿಸಿದ್ದಾರೆ.
ಕಾರ್ಯಕ್ರಮದಲ್ಲಿ ಕುವೆಂಪು ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ.ಪಿ.ವೆಂಕಟರಾಮಯ್ಯ, ಕಾರ್ಯನಿರ್ವಾಹಕ ನಿರ್ದೇಶಕ ಡಾ.ಎಸ್.ಸಿ.ಶರ್ಮ, ಉಪಾಧ್ಯಕ್ಷ ಡಾ.ಕೆ.ಎಂ.ಕಾವೇರಿಯಪ್ಪ ಉಪಸ್ಥಿತರಿದ್ದರು.