ಕಡೂರು: ಪಟ್ಟಣದ ಸಮೀಪ ಹರುವನಹಳ್ಳಿ ಗೇಟ್ನಲ್ಲಿ ನರಿ ಮತ್ತು ಕಾಡುಹಂದಿ ಬೇಟೆಯಾಡಿ ಪಾಣಿಗಳ ಮೃತದೇಹಗಳನ್ನು ಸಾಗಿಸಲು ಯತ್ನಿಸುತ್ತಿದ್ದ ಐವರು ಬೇಟೆಗಾರರನ್ನು ಚಿಕ್ಕಮಗಳೂರು ಅರಣ್ಯ ವಿಶೇಷ ತನಿಖಾ ಸಿಬ್ಬಂದಿಯ ತಂಡ ಬಂಧಿಸಿದೆ. ಪ್ರಾಣಿಗಳ ಮೃತದೇಹ ಮತ್ತು ಬೇಟೆಗೆ ಬಳಸುತ್ತಿದ್ದ ಸಿಡಿಮದ್ದನ್ನೂ ವಶಪಡಿಸಿಕೊಂಡಿದೆ.
ಅರಣ್ಯ ಇಲಾಖೆಯ ತನಿಖಾ ತಂಡ ಶನಿವಾರ ಮಧ್ಯಾಹ್ನದ ವೇಳೆ ಗಸ್ತು ನಡೆಸಲು ಕಡೂರು ಗ್ರಾಮಾಂತರ ಪ್ರದೇಶದೆಡೆ ತೆರಳುವಾಗ ಹರುವನಹಳ್ಳಿ ಬಳಿ ಐವರು ವ್ಯಕ್ತಿಗಳು ಚೀಲಗಳನ್ನು ಹೊತ್ತು ಅನುಮಾನಾಸ್ಪದ ರೀತಿ ಸಾಗುತ್ತಿದ್ದುದು ಕಂಡು ಬಂದಿತು.
ಪಿಎಸ್ಐ ಎಂ.ಎಸ್.ಪ್ರಕಾಶ್ ಮತ್ತು ಸಿಬ್ಬಂದಿ ತನಿಖೆಗೆ ಮುಂದಾದಾಗ ಗಾಬರಿಗೊಂಡ ಬೇಟೆಗಾರರು ಪರಾರಿಯಾಗಲು ಯತ್ನಿಸಿದರು. ಅರಣ್ಯ ಇಲಾಖೆ ಸಿಬ್ಬಂದಿ ಅವರನ್ನು ತಡೆದು ಚೀಲಗಳನ್ನು ಬಿಚ್ಚಿದಾಗ 9್ತ ನರಿಗಳು ಮತ್ತು ಒಂದು ಕಾಡುಹಂದಿಯ ಮೃತದೇಹ ಕಂಡುಬಂದಿತು. ತಕ್ಷಣ ಅವರನ್ನು ಬಂಧಿಸಿ, ಪ್ರಾಣಿಗಳ ಮೃತದೇಹದೊಂದಿಗೆ ಕಡೂರು ಪೊಲೀಸರ ವಶಕ್ಕೆ ಒಪ್ಪಿಸಲಾಯಿತು.
ಬಂಧಿತ ಲೋಕಪ್ಪ, ರಾಮಶೆಟ್ಟಿ, ದಯಾನಂದ, ಅಜ್ಜಿಗೆವಾಲಿ ಮತ್ತು ಪಟುಕು, ಶಿವಮೊಗ್ಗ ಗೌತಮಿ ನಗರದ ಹಕ್ಕಿಪಿಕ್ಕಿ ಕಾಲೊನಿಯವರು. ಬೇಟೆಗಾರರಿಂದ ಪ್ರಾಣಿಗಳ ಮತೃದೇಹ, ಏಳು ಸಿಡಿಮದ್ದು, ಬಲೆ ಮತ್ತು ಹಕ್ಕಿ ಹಿಡಿಯುವ ಪೆಟ್ಟಿಗೆ ಸೇರಿದಂತೆ ಅಂದಾಜು 4.45 ಲಕ್ಷ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಲಾಗಿದೆ ಎಂದು ಕಡೂರು ಪೊಲೀಸ್ ಇನ್ಸ್ಪೆಕ್ಟರ್ ಬಾಲಚಂದ್ರಗೌಡ ಮತ್ತು ಪಿಎಸ್ಐ ರೇವಣ್ಣ ತಿಳಿಸಿದರು.
ವಿಶೇಷ ಅರಣ್ಯ ತನಿಖಾ ದಳದ ಸಿಬ್ಬಂದಿ ಕುಮಾರನಾಯ್ಕ, ವೆಂಕಟೇಶಮೂರ್ತಿ, ಮರಿಸ್ವಾಮಿ, ರಂಗಯ್ಯ, ಹನುಮಂತಪ್ಪ ಮತ್ತು ವಾಹನ ಚಾಲಕ ಲೋಹಿತ್ ಕುಮಾರ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.