ಮುಂಬೈ (ಪಿಟಿಐ): ಆರು ದಶಕಗಳ ಕಾಲ ತಮ್ಮ ವಿಶಿಷ್ಟ ನಟನೆಯಿಂದ ಚಿತ್ರರಸಿಕರ ಮನಸೂರೆಗೊಂಡು, ಶುಕ್ರವಾರ ಇಹಲೋಕ ತ್ಯಜಿಸಿದ ನಟ ಪ್ರಾಣ್ ಅವರ ಅಂತ್ಯಸಂಸ್ಕಾರ ಅಭಿಮಾನಿಗಳ ಕಂಬನಿ ಮಧ್ಯೆ ಶನಿವಾರ ನೆರವೇರಿತು.
ದಾದರ್ನ ಶಿವಾಜಿ ಪಾರ್ಕ್ ಚಿತಾಗಾರದಲ್ಲಿ ಮಧ್ಯಾಹ್ನ ನಡೆದ ಅಂತಿಮ ಸಂಸ್ಕಾರದ ಸಮಯದಲ್ಲಿ ಪ್ರಾಣ್ ಕುಟುಂಬ ವರ್ಗ, ಆಪ್ತ ಸ್ನೇಹಿತರು ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಪುತ್ರರಾದ ಅರವಿಂದ್ ಹಾಗೂ ಸುನೀಲ್ ಅವರು ಅಂತ್ಯಸಂಸ್ಕಾರದ ವಿಧಿವಿಧಾನ ನೆರವೇರಿಸಿದರು.
ಪತ್ನಿ ಶುಕ್ಲಾ, ಪುತ್ರಿ ಪಿಂಕಿ, ಬಾಲಿವುಡ್ ಗಣ್ಯರಾದ ಕರಣ್ ಜೋಹರ್, ಶತ್ರುಘ್ನ ಸಿನ್ಹಾ, ಅನುಪಮ್ ಖೇರ್, ಗುಲ್ಜಾರ್, ಟಿನು ಆನಂದ್ ಇತರರು ಹಾಜರಿದ್ದರು.
ಗಣ್ಯರ ಶೋಕ: ತಮ್ಮ ಅಭಿನಯದಿಂದ ಪ್ರೇಕ್ಷಕರ ಮನದಲ್ಲಿ ಅಚ್ಚಳಿಯದ ಛಾಪು ಮೂಡಿಸಿದ ಪ್ರಾಣ್, ಭಾರತ ಚಿತ್ರರಂಗ ಕಂಡ ಅಪರೂಪದ ನಟ ಎಂದು ಪ್ರಧಾನಿ ಡಾ. ಮನಮೋಹನ ಸಿಂಗ್ ಅವರು ತಮ್ಮ ಶೋಕ ಸಂದೇಶದಲ್ಲಿ ಬಣಿಸಿದ್ದಾರೆ.