ಚಳ್ಳಕೆರೆ: ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಸರ್ಕಾರ ಜನರ ಸಮಸ್ಯೆಗಳನ್ನು ಆಲಿಸದೇ ಆಂತರಿಕ ಕಿತ್ತಾಟದಲ್ಲಿ ಮುಳುಗಿ ಕುರ್ಚಿಗಾಗಿ ಕದನ ನಡೆಸುತ್ತಿದೆ ಎಂದು ಬಿಎಸ್ಆರ್ ಕಾಂಗ್ರೆಸ್ನ ರಾಜ್ಯ ಎಸ್ಸಿ, ಎಸ್ಟಿ ವಿಭಾಗದ ಅಧ್ಯಕ್ಷ ಹಾಗೂ ನಿವೃತ್ತ ಜಿಲ್ಲಾಧಿಕಾರಿ ಬಿ. ಶಿವಪ್ಪ ಹೇಳಿದರು.
ಪಟ್ಟಣದಲ್ಲಿ ಮಂಗಳವಾರ ಬಿಎಸ್ಆರ್ ಕಾಂಗ್ರೆಸ್ನ ತಾಲ್ಲೂಕು ಪರಿಶಿಷ್ಟ ಜಾತಿ ಹಾಗೂ ಪಂಗಡ ಕಾರ್ಯಕರ್ತರ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.
ದೇಶದ ಎಲ್ಲಾ ರಾಜ್ಯಗಳಲ್ಲೂ ಪ್ರಾದೇಶಿಕ ಪಕ್ಷಗಳು ಸ್ಥಾಪನೆ ಆಗುತ್ತಿರುವುದನ್ನು ಗಮನಿಸಿದರೆ, ಮುಂದಿನ ದಿನಗಳಲ್ಲಿ ರಾಜ್ಯದಲ್ಲೂ ಜನತೆ ರಾಷ್ಟ್ರೀಯ ಪಕ್ಷಗಳನ್ನು ತಿರಸ್ಕರಿಸಿ ಪ್ರಾದೇಶಿಕ ಪಕ್ಷಗಳತ್ತ ಒಲವು ತೋರುವುದು ಕಂಡು ಬಂದಿದೆ ಎಂದರು.
ಮಾಜಿ ಶಾಸಕ ಎ. ಉಮಾಪತಿ ಮಾತನಾಡಿ, ಇದುವರೆಗೂ ಕರ್ನಾಟಕದಲ್ಲಿ ಪ್ರಾದೇಶಿಕ ಪಕ್ಷಗಳನ್ನು ಸ್ಥಾಪನೆ ಮಾಡಿರುವವರು ಮಾಜಿ ಮುಖ್ಯಮಂತ್ರಿ ಎನ್ನಿಸಿಕೊಂಡವರು. ಆದರೆ, ಬಿಎಸ್ಆರ್ ಕಾಂಗ್ರೆಸ್ ಸ್ಥಾಪನೆ ಮಾಡಿರುವ ಶ್ರೀರಾಮುಲು ಮಾಜಿ ಮುಖ್ಯಮಂತ್ರಿ ಅಲ್ಲ. ಆದರೂ, ರಾಜ್ಯದಲ್ಲಿ ಯುವಕರು, ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಪಕ್ಷಕ್ಕೆ ಬೆಂಬಲಿಸುತ್ತಿರುವುದು ಕಂಡುಬಂದಿದೆ ಎಂದರು.
ಜಿಲ್ಲಾ ಘಟಕದ ಅಧ್ಯಕ್ಷಎಚ್.ಜೆ. ಕೃಷ್ಣಮೂರ್ತಿ, ನಾಗರಾಜು, ದೊಡ್ಡ ನಂಜಯ್ಯ, ಎಲ್. ನಾಗರಾಜು, ಅಬ್ಬೇನಹಳ್ಳಿ ರೇವಣ್ಣ, ಕಾಲುವೇಹಳ್ಳಿ ಶ್ರೀನಿವಾಸ್, ಶ್ರೀರಾಮುಲು ಸೇನೆ ಅಧ್ಯಕ್ಷ ಶ್ರೀನಿವಾಸ್, ತಿಪ್ಪೇಸ್ವಾಮಿ, ತಾಲ್ಲೂಕು ಪಂಚಾಯ್ತಿ ಮಾಜಿ ಉಪಾಧ್ಯಕ್ಷ ಜಿ.ಟಿ. ನಾಗರಾಜು, ದುರ್ಗಾವರ ರಂಗಸ್ವಾಮಿ, ರುದ್ರಮೂರ್ತಿ, ಗೌರಮ್ಮ ಇದ್ದರು.