ಮೊಳಕಾಲ್ಮುರು: ರಾಷ್ಟ್ರೀಯ ಪಕ್ಷಗಳಿಂದ ದೇಶದ ಸಮಗ್ರ ಅಭಿವೃದ್ಧಿ ಯಾವುದೇ ಕಾರಣಕ್ಕೂ ಸಾಧ್ಯವಿಲ್ಲ. ಪ್ರಾದೇಶಿಕ ಪಕ್ಷಗಳಿಂದ ಮಾತ್ರ ಇದು ಸಾಧ್ಯವಿದ್ದು, ಕೆಲ ರಾಜ್ಯಗಳಲ್ಲಿ ಇದು ಈಗಾಗಲೇ ಸಾಬೀತಾಗಿದೆ ಎಂದು ಬಿಎಸ್ಆರ್ ಕಾಂಗ್ರೆಸ್ ಸಂಸ್ಥಾಪಕ ಬಿ. ಶ್ರೀರಾಮುಲು ಹೇಳಿದರು.
ಸೋಮವಾರ ತಾಲ್ಲೂಕಿನ ರಾಂಪುರದಲ್ಲಿ ಬಿಎಸ್ಆರ್ ಕಾಂಗ್ರೆಸ್ `ಸಂಕಲ್ಪಯಾತ್ರೆ'ಗೆ ಚಾಲನೆ ನೀಡಿದ ನಂತರ ಅವರು ರಾಂಪುರ ಮತ್ತು ಪಟ್ಟಣದಲ್ಲಿ ಹಮ್ಮಿಕೊಂಡಿದ್ದ ಬಹಿರಂಗ ಸಭೆಯಲ್ಲಿ ಅವರು ಮಾತನಾಡಿದರು.
ರಾಷ್ಟ್ರೀಯ ಪಕ್ಷಗಳು ಯಾವುದೇ ನಿರ್ಣಯ ತೆಗೆದುಕೊಳ್ಳಬೇಕಾದಲ್ಲಿ ದೆಹಲಿ ನಾಯಕರ ಅನುಮತಿ ಪಡೆಯಬೇಕು. ಈ ನಾಯಕರು ಯಾವ ರಾಜ್ಯಕ್ಕೆ ಭೇಟಿ ನೀಡುತ್ತಾರೋ ಅಲ್ಲಿಗೆ ಸರಿ ಹೊಂದುವಂತೆ ಹೇಳಿಕೆ, ನಿರ್ಧಾರ ಕೈಗೊಳ್ಳುತ್ತಾರೆ. ಆದ್ದರಿಂದ, ಅನೇಕ ಜ್ವಲಂತ ಸಮಸ್ಯೆಗಳು ಇಂದಿಗೂ ಪರಿಹಾರವಾಗಿಲ್ಲ. ಅದಕ್ಕೆ ರಾಜ್ಯದ ಕಾವೇರಿ ವಿವಾದ, ಗಡಿ ಸಮಸ್ಯೆಗಳು ಸೂಕ್ತ ಸಾಕ್ಷಿಯಾಗಿವೆ. ರಾಷ್ಟ್ರೀಯ ಪಕ್ಷಗಳು ಅಧಿಕಾರ ಬಳಸಿಕೊಂಡು ವಿರೋಧಿಗಳನ್ನು ತನಿಖೆ ಹೆಸರಿನಲ್ಲಿ ಜೈಲಿಗೆ ಹಾಕಿಸುವ ಕಾರ್ಯವನ್ನು ಮಾತ್ರ ಪ್ರಾಮಾಣಿಕವಾಗಿ ಮಾಡುತ್ತಿವೆ ಎಂದು ದೂರಿದರು.
ಬಿಎಸ್ಆರ್ಗೆ ಎಲ್ಲಾ ಕಡೆ ಉತ್ತಮ ಬೆಂಬಲ ಸಿಗುತ್ತಿದೆ. ಅಶಕ್ತರ ಆಶಾಕಿರಣವಾಗಿ ಪಕ್ಷ ಹೊರಹೊಮ್ಮಿದೆ. ಪಕ್ಷ ಅಧಿಕಾರಕ್ಕೆ ಬಂದಲ್ಲಿ ಉಚಿತ ಪಡಿತರ ವಿತರಣೆ, ಎಸ್ಎಸ್ಎಲ್ಸಿ ಪಾಸಾದ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್ಟ್ಯಾಪ್ ನೀಡಿಕೆ, ಸರ್ಕಾರದ ವತಿಯಿಂದಲೇ ಪ್ರತಿವರ್ಷ ಉಚಿತ ಸಾಮೂಹಿಕ ವಿವಾಹ, 12 ಗಂಟೆ ತ್ರೀಫೇಸ್ ವಿದ್ಯುತ್, ನಿರುದ್ಯೋಗಿ ಪದವೀದರರಿಗೆ ್ಙ 5 ಸಾವಿರ ಮಾಸಿಕ ಗೌರವಧನ, ಎಲ್ಲಾ ಜನಾಂಗದ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ, ಬಿತ್ತನೆಗೆ ಮುಂಚಿತವಾಗಿ ಎಲ್ಲಾ ಬೆಳೆಗಳಿಗೆ ಬೆಂಬಲ ಬೆಲೆ ನಿಗದಿ ಕಾರ್ಯಕ್ರಮಗಳನ್ನು ಜಾರಿಗೆ ತರಲಾಗುವುದು ಎಂದು ಭರವಸೆ ನೀಡಿದರು.