ನೆಲಮಂಗಲ: ಸಂಘದ ಶ್ರೇಯೋಭಿವೃದ್ಧಿಯೊಂದಿಗೆ ಸದಸ್ಯರ ಮತ್ತು ಸಾರ್ವಜನಿಕರ ಹಿತ ಕಾಯುವುದು ಸಹಕಾರಿಗಳ ಕರ್ತವ್ಯವಾಗಿದೆ. ಪದಾಧಿಕಾರಿಗಳ ಪ್ರಾಮಾಣಿಕ ಸೇವೆಯಿಂದ ಸಂಘವು ಪ್ರಗತಿ ಪಥದತ್ತ ಸಾಗಿದೆ ಎಂದು ಇಲ್ಲಿನ ಸಹಕಾರಿ ಸಂಘದ ಅಧ್ಯಕ್ಷ ಎನ್.ಎಚ್. ಜಯದೇವಯ್ಯ ಮೆಚ್ಚುಗೆ ವ್ಯಕ್ತಪಡಿಸಿದರು.
ಸ್ಥಳೀಯ ಕವಾಡಿ ಮಠದಲ್ಲಿ ಟೌನ್ ಕೋ ಆಪರೇಟಿವ್ ಸೊಸೈಟಿ ವಾರ್ಷಿಕ ಸರ್ವ ಸದಸ್ಯರ ಮಹಾಸಭೆಯಲ್ಲಿ ಸಂಘದ ಸದಸ್ಯರ ಪ್ರತಿಭಾವಂತ ಮಕ್ಕಳಿಗೆ ಪುರಸ್ಕಾರ ನೀಡಿ ಮಾತನಾಡಿದ ಅವರು, ಸಂಘವು ಸಮುದಾಯ ಸೇವೆಯನ್ನೂ ಸಲ್ಲಿಸಬೇಕು ಎಂದು ಅವರು ಹೇಳಿದರು.
ಸಂಘವು ಉತ್ತಮ ಪ್ರಗತಿ ಸಾಧಿಸಿದ್ದು, ಷೇರಿನ ಲಾಭಾಂಶವನ್ನು ಸದಸ್ಯರಿಗೆ ನೀಡಲಾಗುವುದು. ಸುಸ್ತಿದಾರರ ವಿರುದ್ಧ ಕಾನೂನು ರೀತ್ಯ ಕ್ರಮಕೈಗೊಳ್ಳಲು ಸಹಕರಿಸಬೇಕು ಎಂದು ಕಾರ್ಯದರ್ಶಿ ಗುರುಸಿಂಹ ಕೋರಿದರು.
ಪದಾಧಿಕಾರಿಗಳಾದ ಎಸ್.ಎ.ಸ್ವಾಮಿ, ಪುರಸಭಾ ಅಧ್ಯಕ್ಷ ಸರ್ವೋತ್ತಮರಾವ್, ಎನ್.ಆರ್.ಜಗದೀಶ್, ಸುಬ್ರಮಣ್ಯಶೆಟ್ಟಿ, ಜಿ.ವಿ. ರಾಮಕೃಷ್ಣಯ್ಯ ಸಭೆಯಲ್ಲಿ ಪಾಲ್ಗೊಂಡಿದ್ದರು.