ಹುಬ್ಬಳ್ಳಿ: ‘ಎಂಜಿನಿಯರ್ಗಳು ವೃತ್ತಿ ಬದುಕಿನಲ್ಲಿ ಶಿಸ್ತು, ಪ್ರಾಮಾಣಿಕತೆ ಹಾಗೂ ಪರಿಶ್ರಮ ರೂಢಿಸಿಕೊಂಡರೆ ಸರ್.ಎಂ.ವಿಶ್ವೇಶ್ವರಯ್ಯ ಅವರಂತೆ ಉನ್ನತ ಸಾಧನೆ ಮಾಡಬಹುದು’ ಎಂದು ನೈರುತ್ಯ ರೈಲ್ವೆ ವಿಭಾಗೀಯ ವ್ಯವಸ್ಥಾಪಕ ಸಂಜೀವ ಮಿತ್ತಲ್ ಅಭಿಪ್ರಾಯಪಟ್ಟರು.
ಇಲ್ಲಿನ ಬಿ.ವಿ.ಬಿ.ಎಂಜಿನಿಯರಿಂಗ್ ಕಾಲೇಜಿನಲ್ಲಿ ಭಾನುವಾರ ಅಸೋಸಿಯೇಶನ್ ಆಫ್ ಕನ್ಸಲಿ್ಟಂಗ್ ಎಂಜಿನಿಯರ್ಸ್ ಸಂಸ್ಥೆ (ಎಸಿಸಿಇ) ಆಶ್ರಯದಲ್ಲಿ ನಡೆದ ಎಂಜಿನಿಯರ್ಗಳ ದಿನಾಚರಣೆ ಹಾಗೂ ಸರ್ ಎಂ.ವಿಶ್ವೇಶ್ವರಯ್ಯ ಅವರ 153ನೇ ಜಯಂತ್ಯುತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
‘ವಿಶ್ವೇಶ್ವರಯ್ಯ ಅವರ ನಂತರ ದೇಶದಲ್ಲಿ ಮತ್ತೊಬ್ಬ ಅಂತಹ ಎಂಜಿನಿಯರ್ ಹುಟ್ಟಲಿಲ್ಲ ಎಂಬ ಮಾತು ಸರಿಯಲ್ಲ. ಮೇಲಿನ ಗುಣಗಳನ್ನು ಅಳವಡಿಸಿಕೊಂಡಲ್ಲಿ ಪ್ರತಿಯೊಬ್ಬರೂ ವಿಶ್ವೇಶ್ವರಯ್ಯ ಆಗಬಹುದು. ದೆಹಲಿ ಮೆಟ್ರೋ ರೈಲು ಯೋಜನೆ ಹಾಗೂ ಕೊಂಕಣ ರೈಲ್ವೆ ಯೋಜನೆ ಅನುಷ್ಠಾನಕ್ಕೆ ತಂದ ಇ.ಶ್ರೀಧರನ್ ಆಧುನಿಕ ಭಾರತದಲ್ಲಿ ಅಂತಹದ್ದೇ ಸಾಧನೆಗಳನ್ನು ಮಾಡಿದ್ದಾರೆ’ ಎಂದರು.
ಸರ್ಕಾರಿ ವ್ಯವಸ್ಥೆಯಲ್ಲಿನ ಎಲ್ಲಾ ಅಡೆ–ತಡೆಗಳನ್ನು ನಿವಾರಿಸಿಕೊಂಡು, ನಿಧಾನಗತಿಯ ತೀರ್ಮಾನಗಳನ್ನು ಸಹಿಸಿಕೊಂಡು ಆಧುನಿಕ ತಾಂತ್ರಿಕತೆಯನ್ನು ಅಳವಡಿಸುವ ಮೂಲಕ ಕೃಷ್ಣನ್ ಆ ಸಾಧನೆ ಮಾಡಿದ್ದಾರೆ ಎಂದು ಹೇಳಿದರು.
ವಿಶ್ವೇಶ್ವರಯ್ಯ ಅವರ ಕ್ರಿಯಾಶಕ್ತಿಗೆ ಕೃಷ್ಣರಾಜ ಅಣೇಕಟ್ಟೆಯೇ ಸಾಕ್ಷಿ. ಆಗ ಸಂಪೂರ್ಣ ದೇಸಿ ತಂತ್ರಜ್ಞಾನ ಬಳಸಿ ಕೇವಲ 2.5 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿದ್ದರು. ಆಗಿನ ಸರ್ಕಾರ ಕೇವಲ 80 ಅಡಿ ಎತ್ತರದ ಅಣೇಕಟ್ಟು ಕಟ್ಟಲು ಮಾತ್ರ ಹಣ ಹೊಂದಿಸಲು ಶಕ್ತವಾಗಿತ್ತು. ಅದರಿಂದ ಭವಿಷ್ಯದಲ್ಲಿ ಯಾವುದೇ ಉಪಯೋಗವಿಲ್ಲ ಎಂಬುದನ್ನು ಮನದಟ್ಟು ಮಾಡಿಕೊಟ್ಟ ವಿಶ್ವೇಶ್ವರಯ್ಯ ಸರ್ಕಾರಿ ಬಾಂಡ್ಗಳ ಮೂಲಕ ಹಣ ಸಂಗ್ರಹಿಸಿ 130 ಅಡಿ ಎತ್ತರದ ಅಣೇಕಟ್ಟು ಕಟ್ಟಿದರು ಎಂಬುದನ್ನು ಮಿತ್ತಲ್ ಸ್ಮರಿಸಿದರು.
ಉದ್ಯಮಿ ಡಾ.ವಿ.ಎಸ್.ವಿ. ಪ್ರಸಾದ್, ಸಿವಿಲ್ ಎಂಜಿನಿಯರಿಂಗ್ ಕ್ಷೇತ್ರಕ್ಕೆ ದೊಡ್ಡ ಮಟ್ಟದಲ್ಲಿ ಮಹಿಳೆಯರೂ ಆಸಕ್ತಿ ತೋರುತ್ತಿರುವುದು ಸಕಾರಾತ್ಮಕ ಬೆಳವಣಿಗೆ ಎಂದರು.
ಹುಬ್ಬಳ್ಳಿ ಭಾಗದಲ್ಲಿ ಸಿವಿಲ್ ಎಂಜಿನಿಯರಿಂಗ್ಗೆ ಸಂಬಂಧಿಸಿದ ಅತ್ಯಾಧುನಿಕ ಪ್ರಯೋಗ ಶಾಲೆ ಇಲ್ಲವಾಗಿದೆ. ಎಲ್ಲಾ ತಾಂತ್ರಿಕ ಅಂಶಗಳನ್ನು ಒಳಗೊಂಡ ಪ್ರಯೋಗಶಾಲೆ ಆರಂಭಕ್ಕೆ ಅಸೋಸಿಯೇಶನ್ ಆಫ್ ಕನ್ಸಲಿ್ಟಂಗ್ ಎಂಜಿನಿಯರ್ಸ್ ಸಂಸ್ಥೆ ಮುಂದಾಗಲಿ. ಮುಂದಿನ ವರ್ಷ ಎಂಜಿನಿಯರ್ಗಳ ದಿನಾಚರಣೆ ವೇಳೆಗೆ ಪ್ರಯೋಗ ಶಾಲೆ ಸ್ಥಾಪನೆಯಾಗಲಿ ಎಂದು ಹಾರೈಸಿದರು.
ಇದೇ ಸಂದರ್ಭದಲ್ಲಿ ಹಿರಿಯ ಎಂಜಿನಿಯರ್ಗಳಾದ ಎಂ.ಆರ್.ಪಾಟೀಲ ಹಾಗೂ ಆರ್.ಬಿ.ಸಾಲಿ ಅವರನ್ನು ಎಸಿಸಿಇ ವತಿಯಿಂದ ಸನ್ಮಾನಿಸಲಾಯಿತು. ಸಮಾರಂಭದಲ್ಲಿ ಇಸ್ಕಾನ್ ಸಂಸ್ಥೆಯ ಅಧ್ಯಕ್ಷ ರಾಜೀವ ಲೋಚನದಾಸ, ಎಸಿಸಿಇ ಅಧ್ಯಕ್ಷ ಸುರೇಶ ಕಿರೇಸೂರ, ಜೇಪಿ ಸಿಮೆಂಟ್ಸ್ ನ ವಿ.ಗಣೇಶ್, ಎಸಿಸಿ ಸಿಮೆಂಟ್ಸ್ನ ಸುನಿಲ್ ಶಿಂಧೆ, ಎಸಿಸಿಇ ಪದಾಧಿಕಾರಿಗಳಾದ ಅಶೋಕ ಬಸವಾ, ಎಸ್.ಎಂ.ಶಿರೂರ, ವಸಂತ ನಾಡಜೋಶಿ, ಜಯಶ್ರೀ ಗರಗದ, ಎನ್.ಎ.ಪಾಠಕ್, ಎನ್.ಎಸ್. ನಾಡಿಗೇರ, ಎಸ್.ಪಿ.ಪಾಟೀಲ ಮತ್ತಿತರರು ಪಾಲ್ಗೊಂಡಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.