ಔರಾದ್: ತನಗೆ ಸಿಕ್ಕ 30 ಗ್ರಾಂ. ಬಂಗಾರ ವಾಪಸ್ ಮರಳಿಸಿ ಪ್ರಾಮಾಣಿಕತೆ ಮೆರೆದ ಮಹಿಳೆಗೆ ಭಾನುವಾರ ಇಲ್ಲಿ ನಡೆದ ವಿಶ್ವ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.
ಕೌಠಾ ಹರಳಯ್ಯ ಪ್ರೌಢ ಶಾಲೆಯಲ್ಲಿ ಅಡುಗೆ ಸಹಾಯಕಿಯಾಗಿ ಕೆಲಸ ಮಾಡುತ್ತಿರುವ ಸರಸ್ವತಿ ಅವರಿಗೆ ಕಳೆದ ಕೆಲ ತಿಂಗಳ ಹಿಂದೆ ಬೀದರ್-ಔರಾದ್ ರಸ್ತೆ ಕೌಠಾ ಸೇರುವೆ ಬಳಿ 30 ಗ್ರಾಂ. ಬಂಗಾರದ ಅಭರಣ ಸಿಕ್ಕಿದ್ದವು. ಅವು ಕಳೆದುಕೊಂಡವರಿಗೆ ಒಪ್ಪಿಸಿ ಪ್ರಾಮಾಣಿಕತೆ ಮೆರೆದಿದ್ದಾರೆ ಎಂದು ಅಕ್ಷರ ದಾಸೋಹ ನೌಕರ ಸಂಘದ ಅಧ್ಯಕ್ಷ ಚಂದ್ರಶೇಖರ ಪಾಟೀಲ ಹೇಳಿದರು.
ಮುಖ್ಯ ಅತಿಥಿಯಾಗಿ ಪಾಲ್ಗೊಂಡ ಕ್ಷೇತ್ರ ಶಿಕ್ಷಣಾಧಿಕಾರಿ ಶಿವಕುಮಾರ ಸ್ವಾಮಿ, ಬಡ ಅಡುಗೆ ಮಾಡುವ ಸಹಾಯಕಿಯೊಬ್ಬರು ತನಗೆ ಸಿಕ್ಕ ಬಂಗಾರ ವಾಪಸ್ ಮರಳಿಸಿರುವುದು ತುಂಬ ಸಂತಸ ಸಂಗತಿ. ಮಹಿಳೆಯರು ಶ್ರಮಜೀವಿಗಳು ಮತ್ತು ಪ್ರಾಮಾಣಿಕರು ಎನ್ನುವುದಕ್ಕೆ ಸರಸ್ವತಿ ಅವರೇ ಸಾಕ್ಷಿ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ ತಹಸೀಲ್ದಾರ್ ಸಿದ್ದಲಿಂಗಪ್ಪ ನಾಯಕ, ಪುರುಷರು ಮಹಿಳೆಯರಿಗೆ ಗೌರವ ಕೊಡಬೇಕು. ಪ್ರತಿಯೊಂದು ರಂಗದಲ್ಲಿ ಅವರ ಪಾಲುದಾರಿಕೆ ಇರಬೇಕು ಎಂದು ಹೇಳಿದರು. ಶಿಕ್ಷಣ ಸಂಯೋಜಕ ನಾಗಭೂಷಣ ಮಾಮಡಿ ಮಾತನಾಡಿದರು. ಮಹಿಳಾ ಪೇದೆ ರೇಣುಕಾ ಬಾಲಾಜಿ, ದೀಪಾಲಿ ಪ್ರಭುರಾವ ಅವರನ್ನು ಸನ್ಮಾನಿಸಲಾಯಿತು. ಅಕ್ಷರ ದಾಸೋಹ ನೌಕರ ಸಂಘದ ಕಾರ್ಯದರ್ಶಿ ರಂಗಮ್ಮ ರಾಠೋಡ ಸ್ವಾಗತಿಸಿ ವಂದಿಸಿದರು.