ಕೂಡಲಸಂಗಮ: ಭ್ರಷ್ಟ ಆಚಾರದ ಸಂಚಲನಕ್ಕೆ ಕಡಿವಾಣ ಹಾಕುವ ಶಕ್ತಿ ಬಸವ ಸಂಚಾರ ಯಾತ್ರೆಗೆ ಮಾತ್ರ ಇದೆ. ಇಂದು ಚುನಾವಣೆಯ ಸಂಚಲನ, ಹಣದ ಸಂಚಲನ ಹಾಗೂ ಮಧ್ಯದ ಸಂಚಲನದ ದಿನಮಾನದಲ್ಲಿ ಬಸವ ಸಂಚಾರ ಜನರಲ್ಲಿ ತತ್ವದ ಹಾಗೂ ಪ್ರಾಮಾಣಿಕತೆಯ ಸಂಚಲನ ಮೂಡಿಸಿದೆ ಎಂದು ಕೂಡಲಸಂಗಮ ಲಿಂಗಾಯತ ಪಂಚಮಸಾಲಿ ಪೀಠದ ಜಗದ್ಗುರು ಬಸವಜಯಮೃತ್ಯುಂಜ ಸ್ವಾಮೀಜಿ ಹೇಳಿದರು.
ಬಸವ ಜಯಂತಿ ಶತಮಾನೋತ್ಸವ ಆಚರಣೆಯ ನಿಮಿತ್ತ ಸಾಣೇಹಳ್ಳಿಂದ ಕೂಡಲಸಂಗಮಕ್ಕೆ ಹಮ್ಮಿಕೊಂಡ ಬಸವ ಸಂಚಾರ ಯಾತ್ರೆಯನ್ನು ಸ್ವಾಗತಿಸಿ ಅವರು ಮಾತನಾಡಿದರು.
ನಂತರ ಸಾಣೇಹಳ್ಳಿ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹಾಗೂ ಬಸವಜಯಮೃತ್ಯುಂಜಯ ಸ್ವಾಮೀಜಿ, ಬಸವೇಶ್ವರ ಐಕ್ಯ ಮಂಟಪಕ್ಕೆ ಹೋಗಿ ಬಸವಣ್ಣನವರ ಐಕ್ಯ ಸ್ಥಳದಲ್ಲಿ ಕೆಲವು ಸಮಯ ಮೌನ ಧ್ಯಾನ ಮಾಡಿದರು. ಸಕಲ ಜೀವರಾಶಿಗಳಿಗೆ ಲೇಸಾಗಲಿ ಎಂದು ಬಸವಣ್ಣನವರಲ್ಲಿ ಪ್ರಾರ್ಥಿಸಿ ಕ್ಷೇತ್ರಾಧಿಪತಿ ಸಂಗಮನಾಥನ ದರ್ಶನ ಪಡೆದು ಸಭಾ ಭವನಕ್ಕೆ ಬಂದರು.
ಬಸವ ಸಂಚಾರ ಯಾತ್ರೆಯ ಸ್ವಾಗತ ಸಮಾರಂಭದಲ್ಲಿ ರಾಜ್ಯ ಸಹಕಾರಿ ಮಹಾಮಂಡಳದ ನಿರ್ದೇಶಕ ಎಲ್.ಎಂ. ಪಾಟೀಲ, ಸಂಗಮೇಶ್ವರ ಉಚಿತ ಪ್ರಸಾದ ನಿಲಯದ ಅಧ್ಯಕ್ಷ ಜಿ.ಜಿ. ಪಾಟೀಲ, ಕೂಡಲಸಂಗಮ ಅಭಿವೃದ್ದಿ ಮಂಡಳಿಯ ತಾಂತ್ರಿಕ ಸಲಹೆಗಾರ ಬಸವರಾಜ ಗದ್ವಾಲ, ಶೇಖರಗೌಡ ಗೌಡರ, ಗಂಗಾಧರ ದೊಡಮನಿ, ಸಂಗಣ್ಣ ರೇವಡಿಹಾಳ, ವೀರಣ್ಣ ಶಿವಯೋಗಿ ಮುಂತಾದವರು ಉಪಸ್ಥಿತರಿದ್ದರು.