ಗುಲ್ಬರ್ಗ: ಪಾಪಕ್ಕೆ ಪ್ರಾಯಶ್ಚಿತ್ತ ಇದೆ ಎಂಬುದಕ್ಕೆ ಶ್ರೀ ಮಹರ್ಷಿ ವಾಲ್ಮೀಕಿ ಜೀವನವೇ ಸಾಕ್ಷಿ. ಮಹರ್ಷಿಗಳು ಜ್ಞಾನೋದಯದ ಬಳಿಕ ತಮ್ಮ ಹಿಂದಿನ ಕೃತ್ಯಗಳನ್ನು ಬಿಟ್ಟು ಮಹಾನ್ ಕೃತಿ ಬರೆದರು. ಸಮಾಜದಲ್ಲಿ ಪೂಜನೀಯರಾದರು. ನಾವೆಲ್ಲ ಅವರ ಹಾದಿ ತುಳಿಯಬೇಕು ಎಂದು ವಿಧಾನ ಪರಿಷತ್ ಸದಸ್ಯ ಶಶೀಲ್ ಜಿ.ನಮೋಶಿ ತಿಳಿಸಿದರು.
ಎಸ್.ಎಂ. ಪಂಡಿತ ರಂಗಮಂದಿರದಲ್ಲಿ ಜಿಲ್ಲಾಡಳಿತದ ವತಿಯಿಂದ ನಡೆದ ವಾಲ್ಮೀಕಿ ಜಯಂತಿ ಸಮಾರಂಭದಲ್ಲಿ ಅವರು ಮಾತನಾಡಿದರು. ಶಾಸಕಿ ಅರುಣಾ ಚಂದ್ರಶೇಖರ ಪಾಟೀಲ ರೇವೂರ ಉದ್ಘಾಟಿಸಿದರು. ಇದಕ್ಕೂ ಮೊದಲು ಪ್ರಾರ್ಥನೆ, ಗೀತೆಗಳ ಗಾಯನ ನಡೆಯಿತು. ವಾಲ್ಮೀಕಿ ಭಾವಚಿತ್ರಕ್ಕೆ ಗಣ್ಯರು ಗೌರವ ಸಲ್ಲಿಸಿದರು.
ವಾಲ್ಮೀಕಿ, ಅಂಬೇಡ್ಕರ್, ಬಸವಣ್ಣ ಮತ್ತಿತರ ದಾರ್ಶನಿಕರನ್ನು ಒಂದು ಸಮಾಜ, ವರ್ಗಕ್ಕೆ ಸೀಮಿತಗೊಳಿಸುವುದು ತಪ್ಪು. ಅವರೆಲ್ಲ ಮಾನವ ಕುಲಕ್ಕೆ ದಾರಿದೀಪ. ಸಮಾಜದ ಕಟ್ಟಕಡೆಯ ಮನುಷ್ಯನಿಗೆ ಯೋಜನೆಗಳು ತಲುಪಿದಾಗ ಅವರಿಗೆ ನ್ಯಾಯ ಸಲ್ಲಿಸಿದಂತೆ ಎಂದು ಹೈದರಾಬಾದ್ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷ ಅಮರನಾಥ ಪಾಟೀಲ ಹೇಳಿದರು.
ಶಾಸಕ ಖಮರುಲ್ ಇಸ್ಲಾಂ, ವಿಧಾನಪರಿಷತ್ ಸದಸ್ಯ ಅಲ್ಲಂಪ್ರಭು ಪಾಟೀಲ್, ಹಿರಿಯ ಸಾಹಿತಿ ಆರ್.ಕೆ. ಹುಡಗಿ, ಜಿಲ್ಲಾಧಿಕಾರಿ ಡಾ.ಆರ್. ವಿಶಾಲ್, ಎಸ್ಪಿ ಪ್ರವೀಣ್ ಮಧುಕರ ಪವಾರ್ ಮತ್ತಿತರರು ಇದ್ದರು.
ಇದಕ್ಕೆ ಮೊದಲು ವಾಲ್ಮೀಕಿ ಅವರ ಭಾವಚಿತ್ರದ ಮೆರವಣಿಗೆಯು ಸರ್ದಾರ್ ವಲ್ಲಭಭಾಯಿ ಪಟೇಲ್ ವೃತ್ತದಿಂದ ಎಸ್.ಎಂ. ಪಂಡಿತ ರಂಗಮಂದಿರ ತನಕ ನಡೆಯಿತು. ಕುಂಭ- ಕಳಸ ಹೊತ್ತ ಮಹಿಳೆಯರು, ಡೊಳ್ಳು ಕುಣಿತ, ಹಲಗೆ, ವಿದ್ಯಾರ್ಥಿ, ವಿದಾರ್ಥಿನಿಯರು, ಮುಖಂಡರು, ಆಕರ್ಷಕ ವೇಷಭೂಷಣಗಳ ಜೊತೆಗೆ ಮೆರವಣಿಗೆ ಸಾಗಿತು. ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಎಂ.ಜಿ. ವಿಜಯಕುಮಾರ್ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಮೆರವಣಿಗೆಗೆ ಚಾಲನೆ ನೀಡಿದರು.