ಕುಶಾಲನಗರ: `ಸಮಾಜದಲ್ಲಿ ಪ್ರತಿಯೊಬ್ಬರೂ ಪರಸ್ಪರ ಪ್ರೀತಿ, ವಿಶ್ವಾಸ, ಸಹಬಾಳ್ವೆ ನಡೆಸುವ ಮೂಲಕ ತಮ್ಮ ಬದುಕನ್ನು ಸಾರ್ಥಕಗೊಳಿಸಬೇಕು~ ಎಂದು ಮುಖ್ಯಮಂತ್ರಿ ಸದಾನಂದಗೌಡ ಹೇಳಿದರು.
ಸೋಮವಾರ ಸಂಜೆ ಗೌಡ ಸಮಾಜದ ಸಭಾಂಗಣದಲ್ಲಿ ಏರ್ಪಡಿಸಿದ್ದ ಸಂತೋಷ ಕೂಟದ ಸಮಾರೋಪ ಸಮಾರಂಭದಲ್ಲಿ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ಪಾಲ್ಗೊಂಡು ಮಾತನಾಡಿದರು.
ರಾಜ್ಯ ಮುಖ್ಯಮಂತ್ರಿಯಾಗಿ ಇಡೀ ಸಮಾಜವನ್ನು ಮುನ್ನಡೆಸಿಕೊಂಡು ಹೋಗುವ ಮೂಲಕ ಸಮಾಜಕ್ಕೆ ಗೌರವ ತರುವುದು ತಮ್ಮ ಉದ್ದೇಶ ಎಂದರು.
ನಾನು ಸಿಎಂ ಆಗುತ್ತೇನೆ ಎಂಬ ಕನಸು ಕಂಡವನಲ್ಲ. ತಮಗೆ ರಾಜಕೀಯದಲ್ಲಿ ಈ ತನಕ ನಿರಂತರವಾಗಿ ಎಲ್ಲಾ ಅವಕಾಶಗಳು ಅನೀರಿಕ್ಷಿತವಾಗಿ ಬಂದ ಹುದ್ದೆಗಳು. ತಾವು ರಾಜ್ಯದ ದೀನದಲಿತರು, ದುರ್ಬಲರ ಅಭಿವೃದ್ಧಿಗೆ ಪ್ರಾಮಾಣಿಕ ಹಾಗೂ ಪಾರದರ್ಶಕವಾಗಿ ಕೆಲಸ ಮಾಡುತ್ತಿರುವುದಾಗಿ ತಿಳಿಸಿದರು.
ವಿಧಾನ ಸಭಾಧ್ಯಕ್ಷ ಕೆ.ಜಿ.ಬೋಪಯ್ಯ ಮಾತನಾಡಿ, ಗೌಡ ಜನಾಂಗದ ಆಚಾರ ವಿಚಾರ, ಸಂಪ್ರದಾಯಗಳು ಇತರೆ ಸಮಾಜಗಳಿಗೆ ಮಾದರಿಯಾಗಲಿ ಎಂದರು.
ಶಾಸಕ ಎಂ.ಪಿ.ಅಪ್ಪಚ್ಚುರಂಜನ್, ಜಿ.ಪಂ. ಅಧ್ಯಕ್ಷ ಶಾಂತೆಯಂಡ ರವಿ ಕುಶಾಲಪ್ಪ ಮಾತನಾಡಿದರು.
ಸಮಾಜದ ಅಧ್ಯಕ್ಷ ಕೇಚಪ್ಪನ ಮೋಹನ್ ಅಧ್ಯಕ್ಷತೆ ವಹಿಸಿದ್ದರು.
ಸಮಾಜದ ಮಾಜಿ ಅಧ್ಯಕ್ಷ ಪೊನ್ನಚ್ಚನ ಎಂ.ಮೋಹನ್, ಉಪಾಧ್ಯಕ್ಷ ಕುಂಞಾಳಿ ತಿಲಕ, ಕಾರ್ಯದರ್ಶಿ ಕೊಳಂಬೆ ರಾಜಪ್ಪ ಉಪಸ್ಥಿತರಿದ್ದರು.
ವೈದ್ಯ ಡಾ ದೇವಜನ ಕಿಶೋರ್, ಸಹಾಯಕ ಪ್ರಾಧ್ಯಾಪಕಿ ಡಾ ಕೋರನ ಸರಸ್ವತಿ ಪ್ರಕಾಶ್ ಅವರನ್ನು ಗೌರವಿಸಲಾಯಿತು. ಪಿ.ಎಂ.ಮೋಹನ್ ನಿರ್ವಹಿಸಿದರು. ಸೂದನ ಎಸ್.ಗೋಪಾಲ್ ಸ್ವಾಗತಿಸಿದರು. ಪಂಜಿಪಳ್ಳ ಉಷಾ ಯತೀಶ್ ಪ್ರಾರ್ಥಿಸಿದರು. ಬಿಲ್ಲನ ಸುರೇಶ್ ವರದಿ ವಾಚಿಸಿದರು.