ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರೇಕ್ಷಕರಿಗೂ ಚಾಲೆಂಜ್!

Last Updated 26 ಜನವರಿ 2012, 19:30 IST
ಅಕ್ಷರ ಗಾತ್ರ

`ಇದು ಏಳು ಮಂದಿ ಅಪರಿಚಿತರು ಒಟ್ಟಾಗಿ ಎದುರಿಸುವ ಚಾಲೆಂಜ್~ ಎಂದರು ನಿರ್ಮಾಪಕ ಶ್ರೀಧರನ್. ನಿರ್ದೇಶಕ ಕಾಮರಾಜ್ ಅನುಪಸ್ಥಿತಿಯಲ್ಲಿ `ಚಾಲೆಂಜ್~ ಚಿತ್ರ ನೀಡಿದ ಸವಾಲುಗಳನ್ನು ಬಿಚ್ಚಿಡುವ ಹೊಣೆ ಅವರದ್ದಾಗಿತ್ತು. ಚಿತ್ರೀಕರಣ ಮುಗಿಸಿ ಹಾಡುಗಳನ್ನು ಜನರ ಮುಂದಿರಿಸಿದ ನೆಮ್ಮದಿ ಅವರ ಮುಖದಲ್ಲಿತ್ತು.

ಚಿತ್ರದ ಕಥೆಯನ್ನು ಚಿತ್ರವಾಗಿಸುವುದೇ ಒಂದು ಚಾಲೆಂಜ್ ಆಗಿತ್ತು. ಇದು ಸಾಮಾನ್ಯ ಮನರಂಜನಾ ಚಿತ್ರವಲ್ಲ. ಕ್ಷಣಕ್ಷಣಕ್ಕೂ ಕೌತುಕ ಹುಟ್ಟಿಸುವ, ನವರಸಗಳ ಅನುಭವಗಳನ್ನು ಕಟ್ಟಿಕೊಡುವ ಈ ಚಿತ್ರ ಪ್ರೇಕ್ಷಕನಿಗೂ ಚಾಲೆಂಜ್ ಎಸೆಯುತ್ತದೆ ಎನ್ನುವುದು ಚಿತ್ರತಂಡದ ಅಭಿಮತ.

ಕಾರ್ಖಾನೆಯೊಂದರ ಒಳಗೆ ಏಳು ಅಪರಿಚಿತರು ಸಿಕ್ಕಿ ಹಾಕಿಕೊಳ್ಳುತ್ತಾರೆ. ಅಲ್ಲಿಂದ ಹೊರಬರಲಾಗದೆ ಅವರು 24 ಗಂಟೆ ಒದ್ದಾಡುತ್ತಾರೆ. ಒಂದು ದಿನದಲ್ಲಿ ಅವರು ಅನುಭವಿಸುವ ನರಕಯಾತನೆ, ವಿಷಾನಿಲದಿಂದ ಸ್ಮರಣಶಕ್ತಿಯನ್ನು ಕಳೆದುಕೊಳ್ಳುವುದು- ಹೀಗೆ ನಾನಾ ಬಗೆಯ ಕಷ್ಟಗಳನ್ನು ಮೈನವಿರೇಳಿಸುವಂತೆ ಚಿತ್ರದಲ್ಲಿ ನಿರೂಪಿಸಲಾಗಿದೆ ಎಂದು ಶ್ರೀಧರನ್ ವಿವರಣೆ ನೀಡಿದರು. ಕಾಮರಾಜ್ ಅವರಿಂದ ಕಥೆ ಕೇಳಿದ ಬಳಿಕ ಅದನ್ನು ಅರ್ಥಮಾಡಿಕೊಂಡು ತಮ್ಮಳಗೆ ಹುಟ್ಟಿದ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಲು ನಾಲ್ಕು ಗಂಟೆ ಬೇಕಾಯಿತು ಎಂದು ನಕ್ಕರು. ಕನ್ನಡದಲ್ಲಿ ಗೆದ್ದರೆ ಈ ಚಿತ್ರ ಉಳಿದ ಭಾಷೆಗಳಿಗೂ ರಿಮೇಕ್ ಆಗಲಿದೆ ಎನ್ನುವ ಮಾತನ್ನೂ ಸೇರಿಸಿದರು.

ಹರೀಶ್‌ರಾಜ್, ಸಂಜನಾ ಸಿಂಗ್ ಚಿತ್ರದ ಮುಖ್ಯಭೂಮಿಕೆಯಲ್ಲಿ ಇದ್ದಾರೆ. ಹರೀಶ್‌ರಾಜ್ ಮುಸ್ಲಿಂ ಯುವಕನ ಪಾತ್ರದಲ್ಲಿ ನಟಿಸಿದ್ದಾರೆ. ಆಮದು ನಟಿ ಸಂಜನಾ ಸಿಂಗ್‌ಗೆ ಇದು ಮೊದಲ ಕನ್ನಡ ಚಿತ್ರ. `ಚಿತ್ರದಿಂದ ನಿಜಕ್ಕೂ ಸವಾಲು ಅನುಭವಿಸಿದೆ~ ಎಂದರು ನಟ ಅಚ್ಯುತ್‌ಕುಮಾರ್. ಚಿತ್ರಕ್ಕಾಗಿ ಏಳು ಕೆ.ಜಿ. ತೂಕ ಕಳೆದುಕೊಂಡಿದ್ದನ್ನು ಅವರು ಹೇಳಿಕೊಂಡರು. ದಿಲೀಪ್‌ರಾಜ್, ಧರ್ಮ, ಕಲಾಭವನ್ ಮಣಿ, ರಿಯಾಜ್ ಖಾನ್ ಚಿತ್ರದ ತಾರಾಬಳಗದ ಪ್ರಮುಖರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT