ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರೇಕ್ಷಕರಿಲ್ಲ... ಕಲಾವಿದರೇ ಎಲ್ಲ!

Last Updated 11 ಜನವರಿ 2014, 7:06 IST
ಅಕ್ಷರ ಗಾತ್ರ

ಹಂಪಿ: ರಾಗ, ತಾಳ, ಲಯದ ಸೊಬಗು ನೀಡಿದ ಸಾಂಸ್ಕೃತಿಕ ಕಾರ್ಯಕ್ರಗಳು ಹಂಪಿ ಉತ್ಸವದ ಸಾಂಸ್ಕೃತಿಕ ವೇದಿಕೆಗಳನ್ನು ರಂಗೇರಿಸಿವೆ. ಆದರೆ, ಕಲಾವಿದರಿಗೆ ಪ್ರೇಕ್ಷಕರ ಕೊರತೆ ಎಂದಿಗಿಂತಲೂ ಈ ಬಾರಿ ಹೆಚ್ಚಾಗಿಯೇ ಇದೆ.

ಉತ್ಸವದ ಮೊದಲ ದಿನವಾದ ಶುಕ್ರವಾರ ರಾಷ್ಟ್ರ, ರಾಜ್ಯ ಹಾಗೂ ಸ್ಥಳೀಯ ಕಲಾವಿದರಿಂದ ನಡೆದ ಸಾಂಸ್ಕೃತಿಕ ಕಾರ್ಯಕ್ರಮಗಳು ಇದ್ದ ಅಲ್ಪ ಪ್ರೇಕ್ಷಕರ ಮನ ಗೆಲ್ಲುವಲ್ಲಿ ಯಶಸ್ವಿಯಾದವು.  

ಹಂಪಿಯ ಗಾಯಿತ್ರಿ ಪೀಠದ ಸಮೀಪ ಹಾಕಲಾಗಿರುವ ಶ್ರೀಕೃಷ್ಣದೇವರಾಯ ಪ್ರಧಾನ ವೇದಿಕೆ ಯಲ್ಲಿ ಉದ್ಘಾಟನೆ ಕಾರ್ಯಕ್ರಮದ ನಂತರ ನಡೆದ ಸಾಂಸ್ಕೃತಿಕ ಕಾರ್ಯಕ್ರಮ ಪಾಲ್ಗೊಂಡಿದ್ದ ಮಂತ್ರ ಮುಗ್ದರನ್ನಾಗಿಸಿತು.

ಹಿನ್ನೆಲೆ ಗಾಯಕಿ ಎಂ.ಡಿ. ಪಲ್ಲವಿ ಅವರ ಭಾವಗೀತೆಗಳನ್ನು ಕೇಳಲು ಅಲ್ಪಮಟ್ಟಿಗೆ ಪ್ರೇಕ್ಷರು ಸೇರಿದ್ದನ್ನು ಬಿಟ್ಟರೆ ಬೇರಾವ ವೇದಿಕೆಯಲ್ಲಿಯೂ ನೂರಕ್ಕಿಂತ ಹೆಚ್ಚು ಪ್ರೇಕ್ಷಕರು ಇರಲಿಲ್ಲ.

ಚಲನಚಿತ್ರ ನಿರ್ದೇಶಕಿ ರೂಪಾ ಅಯ್ಯರ್‌ ಅವರ ಸಾಂಪ್ರದಾಯಿಕ ಉಡುಪು ಪ್ರದರ್ಶನ ಉತ್ಸವಕ್ಕೆ ಉತ್ಸಾಹ ತುಂಬಿತು. ಕಸ್ತೂರಿ ಶಂಕರ್‌ ಅವರ ಸುಗಮ ಸಂಗೀತ ಹಾಗೂ ಶಬರಿ ಸಹೋದರರ ಖವ್ವಾಲಿ ಮತ್ತು ಗಝಲ್‌ ಚಳಿಯಲ್ಲಿಯೂ ಬೆಚ್ಚನೆ ಅನುಭವ ನೀಡಿತು. ಬಾಲಿವುಡ್‌ ಗಾಯಕ ಶಾನ್‌ ಅವರ ಹಿಂದಿ ಚಲನಚಿತ್ರ ಗೀತೆಗಳ ಗಾಯನ ಶುಕ್ರವಾರದ ಕೊನೆಯ ಕಾರ್ಯಕ್ರಮವಾಗಿದ್ದರಿಂದ ಪ್ರೇಕ್ಷಕರ ಸಂಖ್ಯೆ ಮತ್ತಷ್ಟು ಸೊರಗಿತ್ತು. 

ಎಂ.ಪಿ.ಪ್ರಕಾಶ್‌ ವೇದಿಕೆಯಲ್ಲಿ ಮೊದಲ ದಿನವೇ ಗಾಂಧರ್ವ ಲೋಕ ಸಷ್ಟಿಯಾಗಬೇಕಿತ್ತು. ಆರಂಭದ ಅರ್ಧ ಗಂಟೆ ಕಾರ್ಯಕ್ರಮ ನೀಡಿದ ಫ್ಯೂಜನ್‌ ಬ್ಯಾಂಡ್‌ ಕೆಲವೇ ಪ್ರೇಕ್ಷಕರ ಪಾಲಾಯಿತು. ಫಯಾಜ್‌ ಖಾನ್‌ ಅವರ ಗಝಲ್‌, ಆರ್ಟಿಕ್ಯೂ­ಲೇಟ್‌ ಇಂಡಿಯಾ ತಂಡದ ಸಾಲ ಬಂಜಿಕೆ, ಕೋಲ್ಕತ್ತಾದ ಅರ್ಪಿತ ವೆಂಕಟೇಶ್‌ ಅವರ ಒಡಿಸ್ಸಿ ನೃತ್ಯ ಕಲಾವಿದರೂ ಕಾರ್ಯಕ್ರಮ ನೀಡಲು ಮುಜುಗುರ ಪಟ್ಟಕೊಳ್ಳುವಷ್ಟು ಪ್ರೇಕ್ಷಕರು ಹಾಜರಾಗಿದ್ದರು. 

ನಂತರ ನಡೆದ ರಿಂಪಾಶಿವ ಅವರ ತಬಲಾ ವಾದನ, ಡಾ.ಸುಮಾ ಸುಧೀಂದ್ರ ಅವರ ಪಂಚ ವೀಣಾವಾದನ ಹಾಗೂ ಹಿಂದೂಸ್ತಾನಿ ಗಾಯಕ ಪ್ರಸನ್ನಗುಡಿ ಅವರ ಗಾಯನ ಕಾರ್ಯಕ್ರಮಗಳು ಪ್ರೇಕ್ಷಕರಿಲ್ಲದೇ ರದ್ದಾಗುವ ಹಂತ ತಲುಪಿದ್ದವು.

ಎದುರು ಬಸವಣ್ಣ ಆವರಣದಲ್ಲಿನ ವಿದ್ಯಾರಣ್ಯ ವೇದಿಕೆ ಸ್ಥಳೀಯ ಕಲಾವಿದರಿಗೆ ಮೀಸಲಿರಿಸಲಾಗಿತ್ತು. ಈ ವೇದಿಕೆಯ ಕಾರ್ಯಕ್ರಮಗಳಿಗಂತೂ ಬೆರಳೆಣಿಕೆಯಷ್ಟು ಪ್ರೇಕ್ಷಕರು ಕಾಣಿಸಿಕೊಂಡರು.

ಬೆಂಗಳೂರಿನ ನೃತ್ಯ ದಿಶಾ ಟ್ರಸ್ಟ್‌ ಅವರ ಅಷ್ಟಲಕ್ಷ್ಮಿ ಜಗನ್‌ ಮೋಹನನೇ ಕೃಷ್ಣ ನೃತ್ಯ ರೂಪಕ ಪ್ರೇಕ್ಷಕರ ಮನಃ ತಣಿಸುವಲ್ಲಿ ಯಶಸ್ವಿಯಾಯಿತು. ಹೂವಿನ­ಹಡಗಲಿ ರಂಗಭಾರತಿ ತಂಡದ ‘ವಾರ್ಡ್‌ ನಂ 6’ ಹಾಸ್ಯ ನಾಟಕ ಪ್ರಸಾರವಾದರೂ ನಗಲು ಪ್ರೇಕ್ಷಕರೆ ಇರಲಿಲ್ಲ.  ವಿರೂಪಾಕ್ಷೇಶ್ವರ ದೇವಸ್ಥಾನದ ಆವರಣದಲ್ಲಿರುವ ಹಕ್ಕ–ಬುಕ್ಕ ವೇದಿಕೆಯಲ್ಲಿ ವೀಣಾ ಕಟಕನಹಳ್ಳಿ ಅವರ ಹಿಂದೂಸ್ತಾನಿ ಗಾಯನ, ಮೇಘಾ ಹುಕ್ಕೇರಿ ಅವರ ಸುಗಮ ಸಂಗೀತ ಹಾಗೂ ಸ್ನೇಹಲತಾ ಅವರ ಕರ್ನಾಟಕ ಸಂಗೀತ ಕಾರ್ಯಕ್ರಮಗಳು ನೆಪ ಮಾತ್ರಕ್ಕೆ ನಡೆದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT