ಮುಂಬೈ (ಪಿಟಿಐ): ಪ್ರೇಮಿಗಳ ದಿನಾಚರಣೆ ಪಾಶ್ಚಾತ್ಯ ಸಂಸ್ಕೃತಿಯ ಬಳುವಳಿ ಎಂದು ತೀವ್ರ ವಿರೋಧ ವ್ಯಕ್ತಪಡಿಸುವ ಮೂಲಕ ಭಾರತೀಯ ಸಂಸ್ಕೃತಿಯ ಸ್ವಯಂಘೋಷಿತ ರಕ್ಷಕರಂತೆ ವರ್ತಿಸುತ್ತಿದ್ದ ಶಿವಸೇನೆ ಈ ಬಾರಿ ಮೌನ ವಹಿಸಿದೆ.
ಶಿವಸೇನೆಯ ಈ ಮೌನಕ್ಕೆ ಕಾರಣಗಳು ಹಲವು. ಸೇನಾ ಮುಖ್ಯಸ್ಥರಾದ ಬಾಳ್ ಠಾಕ್ರೆ ಅವರ ಮೊಮ್ಮಗ ಆದಿತ್ಯ ಪಕ್ಷದ ಯುವಘಟಕದ ನೇತೃತ್ವ ವಹಿಸಿದ್ದು ಒಂದು ಕಾರಣವಾದರೆ ಮುಂಬರಲಿರುವ ಮುಂಬೈ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಪಕ್ಷ ಯುವಕರ ಮತಗಳತ್ತ ದೃಷ್ಟಿ ಹರಿಸಿರುವುದೇ ಮತ್ತೊಂದು ಕಾರಣ ಎನ್ನಲಾಗಿದೆ.
‘ಪ್ರೇಮಿಗಳ ದಿನಾಚರಣೆಗಿಂತಲೂ ಮುಖ್ಯವಾದ ಹಲವು ಸಮಸ್ಯೆಗಳು ನಮ್ಮ ಮುಂದಿವೆ. ಅವುಗಳನ್ನು ಬಗೆಹರಿಸಬೇಕಾದದ್ದು ಅಗತ್ಯವಾಗಿದೆ. ಯುವಜನಾಂಗ ಕೂಡ ಈ ದಿನದ ಬಗ್ಗೆ ನಿರಾಸಕ್ತರಾಗುತ್ತಿದ್ದು ಕಳೆದ ಎರಡು ಮೂರು ವರ್ಷಗಳಿಂದೀಚೆಗೆ ಸಂಭ್ರಮ ಕಡಿಮೆಯಾಗುತ್ತಿದೆ’ ಎಂದು ಭಾರತೀಯ ವಿದ್ಯಾರ್ಥಿ ಸೇನೆ ಅಧ್ಯಕ್ಷ ಅಭಿಜಿತ್ ಪಾನ್ಸೆ ಅಭಿಪ್ರಾಯಪಟ್ಟಿದ್ದಾರೆ.
ಆಗ್ರಾದಲ್ಲಿ ಶಾಂತಿ ಓಟ: ಆಗ್ರಾದಲ್ಲಿ ಪ್ರೇಮಿಗಳ ದಿನಾಚರಣೆಯಂದು ವಿಶ್ವ ಶಾಂತಿಗಾಗಿ ಏರ್ಪಡಿಸಿದ್ದ ಮ್ಯಾರಥಾನ್ನಲ್ಲಿ 20ಸಾವಿರಕ್ಕೂ ಹೆಚ್ಚು ಮಂದಿ ಭಾಗವಹಿಸಿದ್ದರು. ಮಾಜಿ ವಿಶ್ವ ಸುಂದರಿ ಡಯಾನಾ ಹೇಡನ್ ಅವರು ಮ್ಯಾರಥಾನ್ಗೆ ಚಾಲನೆ ನೀಡಿದರು.
ಬಾಲಿವುಡ್ ಶುಭಾಶಯ: ಬಾಲಿವುಡ್ ತಾರೆಯರಾದ ಪ್ರೀತಿ ಜಿಂಟಾ ಮತ್ತು ಅಭಿಷೇಕ್ ಬಚನ್ ಅವರು ತಮ್ಮ ಅಭಿಮಾನಿಗಳಿಗೆ ಪ್ರೇಮಿಗಳ ದಿನಾಚರಣೆಯ ಶುಭಾಶಯ ಕೋರಿದರು.
ಬಚ್ಚನ್ ಟ್ವಿಟ್ಟರ್ನಲ್ಲಿ ‘ಎಲ್ಲರಿಗೂ ಪ್ರೇಮಿಗಳ ದಿನಾಚರಣೆಯ ಶುಭಾಶಯಗಳು’ ಎಂದರೆ, ಪ್ರೀತಿ ಜಿಂಟಾ ‘ಪ್ರೇಮಿಸುವವರೆ, ಸಂತೋಷಪಡಿ, ಪ್ರೀತಿಯಲ್ಲೇ ಬದುಕಿ.’ ಎಂದು ಬರೆದಿದ್ದಾರೆ.ಇದೇ ವೇಳೆ ಬಿಪಾಷಾ ಬಸು, ರಿತೇಶ್ ದೇಶ್ಮುಖ್, ಜಿನೇಲಿಯಾ ಡಿಸೋಜ, ಶ್ರೀಯಾ ಶರಣ್ ಮತ್ತು ಗುಲ್ ಪನಾಗ್ ಪ್ರೇಮಿಗಳ ದಿನಾಚರಣೆಗೆ ಶುಭಾಶಯ ಕೋರಿದ್ದಾರೆ.