ಮುಂಬೈ (ಪಿಟಿಐ): ಮೂರು ದಿನಗಳ ಹಿಂದೆ ತನ್ನ ಪ್ರೇಮಿಯಿಂದ ಚೂರಿ ಇರಿತಕ್ಕೆ ಒಳಗಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 19 ವರ್ಷದ ಯುವತಿ ಮಂಗಳವಾರ ಬೆಳಗಿನ ಜಾವ ಸಾವನ್ನಪ್ಪಿದ್ದಾಳೆ.
ಮೃತ ಯುವತಿ ಹಾಗೂ ಆಕೆಗೆ ಚೂರಿಯಿಂದ ಇರಿದ ಯುವಕ ನಿಖಿಲ್ ಬನಕರ್ ಬಾಂದ್ರಾ ಮ್ಯಾನೇಜ್ಮೆಂಟ್ ಕಾಲೇಜ್ನಲ್ಲಿ ಓದುತ್ತಿದ್ದರು. ಪರಸ್ಪರ ಪ್ರೀತಿಸುತ್ತಿದ್ದ ಅವರ ಸಂಬಂಧದಲ್ಲಿ ಕೆಲವು ದಿನಗಳ ಹಿಂದೆ ಬಿರುಕು ಕಾಣಿಸಿಕೊಂಡಿತ್ತು. ಈ ಕುರಿತು ಡಿಸೆಂಬರ್ 22ರಂದು ಕಾಲೇಜು ಆವರಣದಲ್ಲಿಯೇ ವಾಗ್ವಾದಕ್ಕೆ ಇಳಿದ ನಿಖಿಲ್, ಯುವತಿಯ ಮೇಲೆ ಚಾಕುವಿನಿಂದ ಹತ್ತಾರು ಬಾರಿ ಹಲ್ಲೆ ನಡೆಸಿದ್ದ. ನಂತರ ತಾನೂ ಅದೇ ಚಾಕುವಿನಿಂದ ಕತ್ತು ಕೊಯ್ದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದ.
ತೀವ್ರವಾಗಿ ಗಾಯಗೊಂಡಿದ್ದ ಯುವತಿಯನ್ನು ಆಸ್ಪತ್ರೆಗೆ ಸೇರಿಸಲಾಗಿತ್ತು. ಆದರೆ, ಚಿಕಿತ್ಸೆಗೆ ಸ್ಪಂದಿಸದ ಅವಳು ಮಂಗಳವಾರ ಕೊನೆಯುಸಿರೆಳೆದಳು.