ಬೆಂಗಳೂರು: ಕಾರ್ತಿಕ್ ಎಂಬಾತ ತನ್ನ ಪ್ರೇಯಸಿಯ ಮನೆಯ ಎದುರು ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಕಾಡುಗೊಂಡನಹಳ್ಳಿ ಸಮೀಪದ ಎಚ್ಬಿಆರ್ ಲೇಔಟ್ನಲ್ಲಿ ಗುರುವಾರ ನಡೆದಿದೆ.
ತಂಬುಚೆಟ್ಟಿಪಾಳ್ಯದ ಕಾರ್ತಿಕ್, ಎಚ್ಬಿಆರ್ ಲೇಔಟ್ ಮೂರನೇ ಹಂತದ ಗೀತಾ (ಹೆಸರು ಬದಲಿಸಿದೆ) ಎಂಬ ಯುವತಿಯನ್ನು ಮೂರು ವರ್ಷಗಳ ಹಿಂದೆ ಫೇಸ್ಬುಕ್ ಮೂಲಕ ಪರಿಚಯಿಸಿಕೊಂಡು ಪ್ರೀತಿ ಮಾಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಈ ವಿಷಯ ತಿಳಿದ ಗೀತಾ ಪೋಷಕರು ಆತನ ವಿರುದ್ಧ ಎರಡು ತಿಂಗಳ ಹಿಂದೆ ದೂರು ದಾಖಲಿಸಿದ್ದರು. ಅಲ್ಲದೇ, ಬೇರೊಬ್ಬ ಯುವಕನ ಜತೆ ಮಗಳ ಮದುವೆ ನಿಶ್ಚಯ ಮಾಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
ಇದರಿಂದ ಬೇಸರಗೊಂಡಿದ್ದ ಕಾರ್ತಿಕ್, ಮಧ್ಯಾಹ್ನ ಗೀತಾಳ ಮನೆಯ ಬಳಿ ಹೋಗಿ ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಸ್ಥಳೀಯರು ಆತನನ್ನು ಆಸ್ಪತ್ರೆಗೆ ದಾಖಲಿಸಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಘಟನೆ ಸಂಬಂಧ ಕಾಡುಗೊಂಡನಹಳ್ಳಿ ಪೊಲೀಸರು ಕಾರ್ತಿಕ್ ವಿರುದ್ಧ ಆತ್ಮಹತ್ಯೆ ಯತ್ನ ಪ್ರಕರಣ ದಾಖಲಿಸಿಕೊಂಡಿದ್ದಾರೆ.