ಮಾಲೂರು: ತಾಲ್ಲೂಕಿನಲ್ಲಿ ನಡೆಯುವ ಸಮಾರಂಭಗಳಲ್ಲಿ ಪ್ಲಾಸ್ಟಿಕ್ ಬಳಕೆ ಹೆಚ್ಚಾಗುತ್ತಿದೆ. ಈ ನಿಟ್ಟಿನಲ್ಲಿ ಪ್ಲಾಸ್ಟಿಕ್ ನಿಷೇಧಿಸುವ ಮುಖಾಂತರ ಜನತೆ ಸಹಕಾರ ನೀಡಬೇಕು ಎಂದು ಚಿಕ್ಕತಿರುಪತಿ ಗ್ರಾ.ಪಂ ಅಧ್ಯಕ್ಷ ವಿ.ನಾಗೇಶ್ ತಿಳಿಸಿದರು.
ತಾಲ್ಲೂಕಿನ ಚಿಕ್ಕತಿರುಪತಿ ಗ್ರಾ.ಪಂ. ವತಿಯಿಂದ ಈಚೆಗೆ ಹಮ್ಮಿಕೊಂಡಿದ್ದ ಪ್ಲಾಸ್ಟಿಕ್ ನಿರ್ಮೂಲನ ಕಾರ್ಯಕ್ರಮದಲ್ಲಿ ಮಾತನಾಡಿದರು. ಇಲ್ಲಿನ ಪೆಂಡಾಲ್ ಅಂಗಡಿ ಮಾಲೀಕರು ಮದುವೆ ಸಮಾರಂಭಗಳಗೆ ನೀರಿನ ಲೋಟ ಮತ್ತು ಪ್ಲಾಸ್ಟಿಕ್ ಪೇಪರ್ ಸರಬರಾಜು ಮಾಡಬಾರದು ಹಾಗೂ ಪ್ಲಾಸ್ಟಿಕ್ ನಿರ್ಮೂಲನೆಗೆ ಪ್ರತಿಯೊಬ್ಬರು ತಿಳಿವಳಿಕೆ ಹೊಂದಬೇಕು ಎಂದು ಮನವಿ ಮಾಡಿದರು.
ವಿದ್ಯಾರ್ಥಿಗಳ ಜತೆಯಲ್ಲಿ ಪ್ಲಾಸ್ಟಿಕ್ ಚಿಂದಿ ಆಯುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಪ್ರೌಢಶಾಲಾ ಮುಖ್ಯೋಪಾಧ್ಯಾಯರಾದ ಎಸ್.ಜಮೀರ್ ಪಾಷ, ಮುಖಂಡರಾದ ಧರಣಿ ಬಾಬು, ಬರಗೂರು ನಾರಾಯಣಸ್ವಾಮಿ, ಎನ್.ವೆಂಕಟೇಶ ಮೂರ್ತಿ, ಸಿ.ವಿ.ಚನ್ನಕೃಷ್ಣಾರೆಡ್ಡಿ, ಎ.ಕೆ.ವೆಂಕಟೇಶ್, ಎಸ್.ಮುನಿರಾಜು ಭಾಗವಹಿಸಿದ್ದರು.