ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ಲಾಸ್ಟಿಕ್ ಬಳಕೆ: ರೂ 5ಸಾವಿರ ದಂಡ

Last Updated 13 ಜುಲೈ 2012, 9:00 IST
ಅಕ್ಷರ ಗಾತ್ರ

ಹಾವೇರಿ: ನಗರದಲ್ಲಿ ಪ್ಲಾಸ್ಟಿಕ್ ನಿಷೇಧ ಮಾಡಿರುವುದನ್ನು ಕಟ್ಟು ನಿಟ್ಟಿನಿಂದ ಪಾಲನೆ ಮಾಡುವಂತೆ ಸಾರ್ವಜನಿಕರಲ್ಲಿ ಹಾಗೂ ವ್ಯಾಪಾರಸ್ಥರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ನಗರಸಭೆ ಸಿಬ್ಬಂದಿ ಗುರುವಾರ ಜಾಗೃತಿ ಕಾರ್ಯಕ್ರಮ ಹಮ್ಮಿಕೊಂಡಿದ್ದರು.

ಗುರುವಾರ ಮಧ್ಯಾಹ್ನ ನಗರದ ಜೆಪಿ ವೃತ್ತ, ಬಸ್ ನಿಲ್ದಾಣ  ರಸ್ತೆ ಹಾಗೂ ರಾಷ್ಟ್ರೀಯ ಹೆದ್ದಾರಿಯಲ್ಲಿ ಬರುವ ಪಂಡಿತ ಆಸ್ಪತ್ರೆ ಪ್ರದೇಶದಲ್ಲಿನ ಸುಮಾರು 100ಕ್ಕೂ ಹೆಚ್ಚು ಅಂಗಡಿ ಗಳಿಗೆ ತೆರಳಿದ ನಗರಸಭೆ ಸಿಬ್ಬಂದಿ, ಯಾವುದೇ ಕಾರಣಕ್ಕೂ ಪ್ಲಾಸ್ಟಿಕ್ ಕವರ್‌ಗಳು, ಲೋಟಗಳು, ಕ್ಯಾರಿಬ್ಯಾಗ್  ಬಂಟಿಂಗ್ಸ್, ಪ್ಲಾಸ್ಟಿಕ್ ರೋಲ್,   ಸ್ಟ್ರಾ  ಸೇರಿದಂತೆ ಯಾವುದೇ ತರಹದ ಪ್ಲಾಸ್ಟಿಕ್ ತ್ಯಾಜ್ಯವಾಗುವ ವಸ್ತುಗಳ ಬಳಕೆ  ಹಾಗೂ ಮಾರಾಟ  ಮಾಡಬಾರದು ಎಂದು ಸೂಚಿಸಿದರು.

ನಗರದಲ್ಲಿ ಪ್ಲಾಸ್ಟಿಕ್ ನಿಷೇಧವಿದ್ದರೂ ಬಹುತೇಕ ಅಂಗಡಿಗಳಲ್ಲಿ ಇನ್ನೂ ಪಾಸ್ಟಿಕ್ ಕವರ್ ಹಾಗೂ ಕ್ಯಾರಿಬ್ಯಾಗ್‌ಗಳ ಮಾರಾಟ ಅವ್ಯಾಹತವಾಗಿ ನಡೆ ಯುತ್ತಿರುವುದು  ಬೆಳಕಿಗೆ ಬಂದಿದೆ ಯಲ್ಲದೇ. ಇನ್ನೊಮ್ಮೆ ಅಂಗಡಿಗಳಲ್ಲಿ ಪ್ಲಾಸ್ಟಿಕ್ ಕವರ್ ಹಾಗೂ ಕ್ಯಾರಿಬ್ಯಾಗ್‌ಗಳು ಕಂಡು ಬಂದರೆ ಸ್ಥಳದಲ್ಲಿಯೇ 5 ಸಾವಿರ ರೂ. ದಂಡ ವಿಧಿಸಲಾಗುವುದು ಎಂದು ಜಾಗೃತಿಗೆ ತೆರಳಿದ ಸಿಬ್ಬಂದಿ ವ್ಯಾಪಾರಸ್ಥರಿಗೆ ಎಚ್ಚರಿಸಿದರು.

ಇದೇ ಸಂದರ್ಭದಲ್ಲಿ ನಗರಸಭೆ ಪರಿಸರ ಎಂಜಿನಿಯರ್ ಚಂದ್ರಕಾಂತ ಕುಡನವರ ಮಾಧ್ಯಮದವರೊಂದಿಗೆ ಮಾತನಾಡಿ,ನಗರದಲ್ಲಿ ಒಂದು ದಿನಕ್ಕೆ 20 ಟನ್‌ಗೂ ಅಧಿಕ ಘನತ್ಯಾಜ್ಯ ವಸ್ತು ಉತ್ಪತ್ತಿಯಾಗುತ್ತದೆ. ಇದರಲ್ಲಿ ಅಂದಾಜು 5 ಟನ್‌ಗೂ ಅಧಿಕ ಪ್ರಮಾಣ ದಲ್ಲಿ ಪ್ಲಾಸ್ಟಿಕ್ ತ್ಯಾಜ್ಯ ಇರುತ್ತದೆ ಎಂಬ ಆಘಾತಕಾರಿ ಅಂಶ ಬೆಳಕಿಗೆ ತಂದರು.

ಈ ತ್ಯಾಜ್ಯವನ್ನು ಸಾರ್ವಜನಿಕರು ಅವೈಜ್ಞಾನಿಕವಾಗಿ ಎಲ್ಲೆಂದರಲ್ಲಿ ಎಸೆಯು ವುದರಿಂದ ಪ್ರತ್ಯಕ್ಷ ಹಾಗೂ ಪರೋಕ್ಷ ವಾಗಿ ನಗರದ ಪ್ರದೇಶದ ಪರಿಸರ, ಸೌಂದರ್ಯ, ಸಾರ್ವಜನಿಕ ಆರೋಗ್ಯ, ಪೌರ ಕಾರ್ಮಿಕರ ಆರೋಗ್ಯ ಮತ್ತು ಸಾಕು ಪ್ರಾಣಿಗಳ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಲಿದೆ  ಎಂದರು.

ಪ್ಲಾಸ್ಟಿಕ್ ತ್ಯಾಜ್ಯದಿಂದ ಜನರ ಮೇಲೆ ಉಂಟಾಗುವ ದುಷ್ಪರಿಣಾಮ ತಡೆಗಟ್ಟುವ ಉದ್ದೇಶದಿಂದ ನಗರಸಭೆ  ಪ್ಲಾಸ್ಟಿಕ್  ಬಳಕೆ ನಿಷೇಧಿಸಲಾಗಿದೆ.   ಈಗಾಗಲೇ ಪ್ರಕಟಣೆ ಮೂಲಕ ಸಾರ್ವಜನಿಕರಲ್ಲಿ ಹಾಗೂ ವ್ಯಾಪಾರ ಸ್ಥರಲ್ಲಿ ಹಲವಾರು ಬಾರಿ ಮನವಿ ಮಾಡಿ ಕೊಂಡರೂ ಯಾವುದೇ ಪ್ರಯೋಜನ ವಾಗಿಲ್ಲ. ಆ ಕಾರಣದಿಂದ ನಗರಸಭೆ ಸಿಬ್ಬಂದಿ ನೇರವಾಗಿ ಅಂಗಡಿ ಮುಂಗಟ್ಟು ಗಳಿಗೆ ತೆರಳಿ ಜಾಗೃತಿ ಮೂಡಿಸುವ ಕಾರ್ಯ ಆರಂಭಿಸಿದೆ ಎಂದರು.

ಈಗಾಗಲೇ ಬಹುತೇಕ ಜನರಲ್ಲಿ ಪ್ಲಾಸ್ಟಿಕ್ ಬಳಕೆಯಿಂದ ಆಗುವ ದುಷ್ಪರಿ ಣಾಮದ ಅರಿವಿನ ಬಗ್ಗೆ ಜಾಗೃತಿ ಮೂಡುತ್ತಿದೆ. ಆದರೂ ಕೆಲವಡೆ ಬಳಕೆ ಮಾಡುವ ಪ್ರಕ್ರಿಯೆ ಮುಂದುವರೆದಿದೆ. ಮುಂಬರುವ ದಿನಗಳಲ್ಲಿ ಪ್ಲಾಸ್ಟಿಕ್ ಬಳಕೆ ಕಂಡು ಬಂದರೆ ಬಳಕೆ ಮಾಡಿದವರ ಮೇಲೆ ಕನಿಷ್ಟ ರೂ 500 ರಿಂದ 5000  ದಂಡ ವಸೂಲಿ ಮಾಡಲಾಗುತ್ತದೆ ಎಂದು ತಿಳಿಸಿದರು.ನಗರಸಭೆ ಸಿಬ್ಬಂದಿ ವಿ.ಆರ್. ನಾರಾಯಣ, ಕೆ.ಕೆ.ಗಾವಡೆ, ಆರ್.ಆರ್. ಮುಂಜೋಜಿ  ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT