ಶ್ರೀರಂಗಪಟ್ಟಣ: ಪ್ಲೋರೈಡ್ಯುಕ್ತ ನೀರು ಸೇವನೆಯಿಂದ ಅಕಾಲ ವೃದ್ಧಾಪ್ಯ, ಚರ್ಮ ಸುಕ್ಕು, ಸ್ನಾಯು ಸೆಳೆತ, ಕೀಲು ನೋವು ಇತರ ಬೇನೆಗಳಿಗೆ ತುತ್ತಾಗಬೇಕಾಗುತ್ತದೆ ಎಂದು ರಾಜ್ಯ ನೀರು ಮತ್ತು ನೈರ್ಮಲ್ಯ ಮಿಷನ್ನ ರಾಸಾಯನಿಕ ತಜ್ಞ ನಾಗರಾಜು ಹೇಳಿದರು.
ಸಮೀಪದ ಬಾಬುರಾಯನಕೊಪ್ಪಲಿನಲ್ಲಿ ಬುಧವಾರ ರಾಜ್ಯ ನೀರು ಮತ್ತು ನೈರ್ಮಲ್ಯ ಮಿಷನ್ ಏರ್ಪಡಿಸಿದ್ದ ನೀರಿನ ಗುಣಮಟ್ಟ ಪರೀಕ್ಷೆ ಹಾಗೂ ಸದ್ಬಳಕೆ ಕುರಿತ ಕಾರ್ಯಾಗಾರದಲ್ಲಿ ಉಪನ್ಯಾಸ ನೀಡಿದರು. ನೈಟ್ರೈಟ್ಯುಕ್ತ ನೀರು ಕೂಡ ಅಪಾಯಕಾರಿ. ಇದರಿಂದ ರಕ್ತಹೀನತೆ, ಗರ್ಭಪಾತ ಇತರ ಗಂಭೀರ ಸಮಸ್ಯೆ ತಲೆದೋರುತ್ತವೆ. ಕುಡಿಯುವ ನೀರಿಗೆ ಸ್ಫಟಿಕ ಮತ್ತು ಆಲಂ ಬೆರೆಸುವ ಮೂಲಕ ಪ್ಲೋರೈಡ್ ಅಂಶಕ್ಕೆ ಕಡಿವಾಣ ಹಾಕಬೇಕು ಎಂದರು.
ಕುಡಿಯುವ ನೀರಿನ ಪಿಎಚ್ (ಪವರ್ ಆಫ್ ಹೈಡ್ರೋಜನ್) ಮಟ್ಟ 7.0 ಕ್ಕಿಂತ ಹೆಚ್ಚು ಅಥವಾ ಕಡಿಮೆ ಇದ್ದರೆ ಅಂತಹ ನೀರು ಕುಡಿಯಬಾರದು. ಗಡಸು ನೀರು ಬಳಸುವುದರಿಂದ ಮೂತ್ರಪಿಂಡ ಸಮಸ್ಯೆ ಉಂಟಾಗುತ್ತದೆ. ಎಂದು ಸಲಹೆ ನೀಡಿದರು. ಭೂಗರ್ಭಶಾಸ್ತ್ರಜ್ಞ ರಾಮಕೃಷ್ಣ, ಗ್ರಾ.ಪಂ. ಅಧ್ಯಕ್ಷ ಬಾಲುಕುಮಾರ್, ಉಪಾಧ್ಯಕ್ಷ ಶ್ರೀನಿವಾಸ್, ಅಭಿವೃದ್ಧಿ ಅಧಿಕಾರಿ ಶ್ರೀನಿವಾಸ್, ಸಂಯೋಜಕರಾದ ರಾಜಶೇಖರ್, ಚಂದ್ರಶೇಖರ್ ಇದ್ದರು.