ಹುಮನಾಬಾದ್: ತಾಲ್ಲೂಕಿನ ಇಟಗಾ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಳಖಿಂಡಿ ಗ್ರಾಮದಲ್ಲಿ ವಿವಿಧ ವಸತಿ ಯೋಜನೆ ಆಯ್ಕೆ ಪಟ್ಟಿಯಲ್ಲಿ ಅನರ್ಹರ ಹೆಸರು ಸೇರ್ಪಡೆ ಮಾಡಲಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಅನರ್ಹರ ಹೆಸರು ರದ್ದುಗೊಳಿಸಿ, ಆ ಸ್ಥಳದಲ್ಲಿ ಅರ್ಹರ ಹೆಸರು ಸೇರ್ಪಡೆ ಮಾಡಬೇಕು ಎಂದು ಒತ್ತಾಯಿಸಿ ಗ್ರಾಮದ 40ಕ್ಕೂ ಅಧಿಕ ಮಂದಿ ಶುಕ್ರವಾರ ತಾಲ್ಲೂಕು ಪಂಚಾಯಿತಿ ಅಧಿಕಾರಿಗೆ ಮನವಿ ಸಲ್ಲಿಸಿದರು.
ಇಲಾಖೆ ಹಿರಿಯ ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿ, ವಾಸ್ತವಾಂಶ ಪರಿಶೀಲಿಸಿ, ಅರ್ಹರ ಹೆಸರನ್ನು ಪಟ್ಟಿಗೆ ಸೇರ್ಪಡೆ ಮಾಡಬೇಕು. ಫಲಾನುಭವಿ ಆಯ್ಕೆ ನೆಪದಲ್ಲಿ ಅವ್ಯವಹಾರ ಎಸಗಿರುವ ವಿವಿಧ ಹಂತದ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದರು.
ಮುಖಂಡರಾದ ವಿಜಯಕುಮಾರ ಕೆ.ಪಾಟೀಲ, ಹಣಮಂತರಾವ ಎಸ್.ನಿಂಗದಳ್ಳಿ, ವೈಜಿನಾಥ ಕೊಡಂಬಲ್, ಮುನ್ನಾ ನವಾಬಸಾಬ್, ಮೆಹೆಬೂಬ್, ತುಕಾರಾಮ ಹಂದಿಕೇರಾ, ಈಶ್ವರ ವಿ.ಬೋರಂಪಳ್ಳಿ, ಮಲ್ಲಪ್ಪ, ಅಂಬೃತರಾವ, ದಯಾನಂದ ಕಿಣ್ಣಿಕರ್, ಟಿ.ಹೆಚ್.ರಮೇಶಕುಮಾರ, ಜಗದೇವಿ, ವೆಂಕಮ್ಮ, ತೇಜಮ್ಮ, ಸೂರ್ಯಕಾಂತ ನಿಂಗದಳ್ಳಿ, ಲಕ್ಷ್ಮೀ ಕಟಗಿ, ಮಲ್ಲಮ್ಮ, ರಂಗಮ್ಮ, ಅಂಬಿಕಾ ಹಾಗೂ ದಲಿತ ಸಂಘರ್ಷ ಸಮಿತಿ (ಭೀಮವಾದ) ತಾಲ್ಲೂಕು ಸಂಚಾಲಕ ಮಾಣಿಕರಾವ ಬಿ.ಪವಾರ, ಭಾರತೀಯ ಜೈಭೀಮ ದಳದ ಶಂಕರಪ್ರಭಾ ಜಂಜೀರ್, ಸುಭಾಷ ಆರ್ಯ ಇದ್ದರು.