ಸೊರಬ: ಪ್ರಸಕ್ತ ಸಾಲಿನಲ್ಲಿ ವಿವಿಧ ಇಲಾಖೆಗಳ ಯೋಜನೆಗಳ ಅಡಿಯಲ್ಲಿ ಬಿಡುಗಡೆಗೊಂಡ ಸೌಲತ್ತುಗಳನ್ನು ಶಾಸಕ ಎಚ್. ಹಾಲಪ್ಪ ಶನಿವಾರ ವಿತರಿಸಿದರು.
ಅರಣ್ಯ ಇಲಾಖೆ ವತಿಯಿಂದ ಸೋಲಾರ್ ದೀಪ, ದೇವರಾಜ ಅರಸು ಹಿಂದುಳಿದ ನಿಗಮದ ವತಿಯಿಂದ ಸಾಲ ಸೌಲಭ್ಯ, ಡಾ.ಅಂಬೇಡ್ಕರ್ ಅಭಿವೃದ್ಧಿ ನಿಗಮದಿಂದ ಗಂಗಾ ಕಲ್ಯಾಣ ಯೋಜನೆಯ ಚೆಕ್ ಹಾಗೂ ನೇರ ಸಾಲದ ಕಾರುಗಳನ್ನು ಅವರು ಫಲಾನುಭವಿಗಳಿಗೆ ವಿತರಿಸಿದರು.
ಪಟ್ಟಣ ಪಂಚಾಯ್ತಿ ಕಚೇರಿಯಲ್ಲಿ ಆಶ್ರಯ ವಸತಿ ಯೋಜನೆ ಅಡಿ ಮನೆಗಳಿಗಾಗಿ ಸಲ್ಲಿಸಿದ 57 ಅರ್ಜಿಗಳನ್ನು ಪರಿಶೀಲಿಸಿದರು. 113ನೇ ಸರ್ವೇ ನಂಬರ್ನಲ್ಲಿ ಈಗಾಗಲೇ ಮನೆ ಕಟ್ಟಿಕೊಂಡಿದ್ದು, ಹಕ್ಕುಪತ್ರ ಇಲ್ಲದಿದ್ದರೂ, ಅದು ಸರ್ಕಾರಿ ಜಾಗ ಅಗಿರುವುದರಿಂದ ಅಂತಹ ಅರ್ಜಿಗಳ ಬಗ್ಗೆ ಕೂಲಂಕಶ ಪರಿಶೀಲನೆ, ಚರ್ಚೆ ನಂತರ ಸೂಕ್ತಕ್ರಮ ತೆಗೆದುಕೊಳ್ಳಿ ಎಂದು ಸಲಹೆ ನೀಡಿದರು.
ಪಟ್ಟಣದ ಸರ್ಕಾರಿ ಪ್ರಥಮದರ್ಜೆ ಕಾಲೇಜಿಗೆ ತೆರಳಿ ಕಾಲೇಜಿನ ಅಭಿವೃದ್ಧಿಗೆ ಅಗತ್ಯ ಇರುವ ಶಾಲಾ ಅರಣ್ಯ, ಉದ್ಯಾನ, ಬೈಸಿಕಲ್ನಿಲ್ದಾಣ, ನೀರಿನ ಸೌಲಭ್ಯ ಇನ್ನಿತರ ಕಾಮಗಾರಿ ಬಗ್ಗೆ ಪ್ರಾಂಶುಪಾಲ ಹಾಗೂ ಅಧಿಕಾರಿಗಳೊಂದಿಗೆ ಚರ್ಚಿಸಿದರು.
ಸರ್ಕಾರಿ ಪದವಿಪೂರ್ವ ಕಾಲೇಜು ಎದುರು ನಿರ್ಮಿಸಿರುವ ಶೌಚಾಲಯವನ್ನು ಕೂಡಲೇ ಸ್ಥಳಾಂತರ ಮಾಡುವಂತೆ ಸೂಚಿಸಿದರು.
ಪ.ಪಂ. ಅಧ್ಯಕ್ಷೆ ವಿಜಯಾ ಮಹಾಲಿಂಗಪ್ಪ, ಉಪಾಧ್ಯಕ್ಷ ಪ್ರಶಾಂತ್ಮೇಸ್ತ್ರಿ, ಸಿಒ ವೀರೇಶ್, ತಾ.ಪಂ. ಇಒ ಪುಷ್ಪಾ ಕಮ್ಮಾರ್, ಪ್ರಾಂಶುಪಾಲ ಪ್ರೊ.ಕೃಷ್ಣಪ್ಪ, ಎಸಿಎಫ್ ಚಂದ್ರಶೇಖರ್, ಎಪಿಎಂಸಿ ಅಧ್ಯಕ್ಷ ಗಜಾನನರಾವ್, ದಿನಕರಭಟ್ ಭಾವೆ, ಆಶ್ರಯ ಸಮಿತಿ ಸದಸ್ಯರಾದ ಮಂಚಿ ಹನುಮಂತಪ್ಪ, ಅನ್ವರ್, ಜಯಮ್ಮ, ಸಂಜೀವಾಚಾರಿ ಇತರರು ಇದ್ದರು.