ಯಲಹಂಕ: ಚೌಡೇಶ್ವರಿ ವಾರ್ಡ್ ವ್ಯಾಪ್ತಿಯಲ್ಲಿ ಬಿಬಿಎಂಪಿ ವತಿಯಿಂದ ಶೇ.22.75ರ ಅಡಿಯಲ್ಲಿ 1.90 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿರುವ 54 ಮನೆಗಳನ್ನು ಶಾಸಕ ಎಸ್.ಆರ್.ವಿಶ್ವನಾಥ್ ಅವರು ಕೆಂಚೇನಹಳ್ಳಿಯಲ್ಲಿ ನಡೆದ ಸಮಾರಂಭದಲ್ಲಿ ಫಲಾನುಭವಿಗಳಿಗೆ ಹಸ್ತಾಂತರಿಸಿದರು.
ನಂತರ ಮಾತನಾಡಿದ ಅವರು, ಶೀಘ್ರದಲ್ಲಿಯೇ ಯಲಹಂಕ ಭಾಗದಲ್ಲಿ 365 ಹಕ್ಕುಪತ್ರ ಹಾಗೂ ನೂತನವಾಗಿ ನಿರ್ಮಿಸಿರುವ ಸುಮಾರು 300 ಮನೆಗಳನ್ನು ಫಲಾನುಭವಿಗಳಿಗೆ ಹಸ್ತಾಂತರ ಮಾಡಲಾಗುವುದು ಎಂದು ಭರವಸೆ ನೀಡಿದರು.
ಗ್ರಾಮೀಣ ಭಾಗದಲ್ಲಿ ಹೆಚ್ಚಿನ ಕಾಮಗಾರಿಗಳನ್ನು ಕೈಗೊಳ್ಳಲು 10 ಕೋಟಿ ಅನುದಾನ ನೀಡಬೇಕೆಂದು ಮೇಯರ್ ಅವರಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಇದಕ್ಕೆ ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ಹೇಳಿದರು. ಇದೇ ಸಂದರ್ಭದಲ್ಲಿ ನೂತನವಾಗಿ ನಿರ್ಮಿಸಿರುವ ಸಮುದಾಯ ಭವನವನ್ನು ಅವರು ಉದ್ಘಾಟಿಸಿದರು.
ಬಿಬಿಎಂಪಿ ಸದಸ್ಯರಾದ ಕೆ.ವಿ.ಯಶೋಧಾ ರವಿಶಂಕರ್, ಎಂ.ಮುನಿರಾಜು, ಮುಖ್ಯ ಎಂಜಿನಿಯರ್ ರಮೇಶ್, ಕಾರ್ಯಪಾಲಕ ಎಂಜಿನಿಯರ್ ರಂಗಯ್ಯ, ಸಹಾಯಕ ಕಾರ್ಯಪಾಲಕ ಎಂಜಿನಿಯರ್ ರಾಜಣ್ಣ, ಬೆಂಗಳೂರು ಹಾಲು ಒಕ್ಕೂಟದ ಉತ್ತರ ತಾಲ್ಲೂಕು ನಿರ್ದೇಶಕ ದಿಬ್ಬೂರು ಜಯಣ್ಣ, ಬಿಜೆಪಿ ಮುಖಂಡರಾದ ರಾಜಣ್ಣ, ಡಾ.ಶಶಿಕುಮಾರ್ ಮೊದಲಾದವರು ಉಪಸ್ಥಿತರಿದ್ದರು.