ಬಳ್ಳಾರಿ: ಎಐಡಿಎಸ್ಒ, ಎಐಎಂಎಸ್ಎಸ್ ಸಂಘಟನೆಯು ವಿದ್ಯಾರ್ಥಿಗಳ ನಿಯೋಗದೊಂದಿಗೆ ಸೋಮವಾರ ಸ್ಥಳೀಯ ವಿಜಯನಗರ ಶ್ರೀಕೃಷ್ಣ ದೇವರಾಯ ವಿಶ್ವವಿದ್ಯಾಲಯದ ಕುಲಸಚಿವರು ಹಾಗೂ ವಿಶೇಷ ಅಧಿಕಾರಿಗಳನ್ನು ಭೇಟಿ ಮಾಡಿ ವಿದ್ಯಾರ್ಥಿಗಳ ಬೇಡಿಕೆ ಈಡೇರಿಕೆಗೆ ಮನವಿ ಸಲ್ಲಿಸಿತು.
ಇತ್ತೀಚೆಗೆ ವಿಶ್ವವಿದ್ಯಾಲಯ ನಡೆಸಿದ ಬಿ.ಕಾಂ 2ನೇ ಸೆಮಿಸ್ಟರ್ ಪರೀಕ್ಷೆಯಲ್ಲಿ ಭಾಗವಹಿಸಿದ್ದ ಅನೇಕ ವಿದ್ಯಾರ್ಥಿಗಳು ಕಂಪ್ಯೂಟರ್ ಅಪ್ಲಿಕೇಷನ್ ಹಾಗೂ ಬೇಸಿಕ್ ಇಂಗ್ಲಿಷ್ ವಿಷಯದಲ್ಲಿ ಅನುತ್ತೀರ್ಣರಾಗಿದ್ದು ದಿಗ್ಭ್ರಮೆ ಮೂಡಿಸಿದೆ. ಹೊಸ ರೀತಿಯ ಪ್ರಶ್ನೆ ಪತ್ರಿಕೆ ಸಿದ್ಧಪಡಿಸಿ, ಕೆಲವು ಪ್ರಶ್ನೆಗಳು ಅಸ್ಪಷ್ಟ ಆಗಿದ್ದುದರಿಂದ ವಿದ್ಯಾರ್ಥಿ ಗಳಿಗೆ ಉತ್ತರಿಸಲು ಕಷ್ಟವಾಗಿದ್ದು, ಕೂಡಲೇ ವಿಶ್ವವಿದ್ಯಾಲಯ ಈ ನ್ಯೂನತೆ ಸರಿಪಡಿಸಬೇಕು ಎಂದು ಕೋರ ಲಾಯಿತು.
ಪರೀಕ್ಷಾ ಕ್ರಮ ಮತ್ತು ಫಲಿತಾಂಶ ಗಳಿಗೆ ಸಂಬಂಧಪಟ್ಟಂತೆ ತನಿಖೆ ನಡೆಸಲು ನಿಷ್ಪಕ್ಷಪಾತ ಸಮಿತಿ ರಚಿಸ ಬೇಕು, ಬಿ.ಕಾಂ 2ನೇ ಸೆಮಿಸ್ಟರ್ನ ಕಂಪ್ಯೂಟರ್ ಅಪ್ಲಿಕೇಷನ್ ಹಾಗೂ ಬೇಸಿಕ್ ಇಂಗ್ಲಿಷ್ ವಿಷಯದ ಪ್ರಶ್ನೆ ಪತ್ರಿಕೆಗಳನ್ನು ತಜ್ಞರ ಅಧ್ಯಯನಕ್ಕೆ ಒಳಪಡಿಸಬೇಕು, ವಿವಿ ತಪ್ಪಿನಿಂದಾಗಿ ವಿದ್ಯಾರ್ಥಿಗಳು ಅನುತ್ತೀರ್ಣರಾಗಿದ್ದು, ಇದನ್ನು ಸರಿಪಡಿಸಬೇಕು ಎಂದು ಆಗ್ರಹಿಸಿದರು.
ಪಠ್ಯಕ್ರಮ ಪರೀಕ್ಷಾ ಪದ್ಧತಿ ಮೌಲ್ಯಮಾಪನ ಕುರಿತು ಮಾಹಿತಿ ಗಳನ್ನು ಎಲ್ಲ ಕಾಲೇಜಿನ ವಿದ್ಯಾರ್ಥಿಗಳಿಗೆ ತಲುಪುವಂತೆ ಅಗತ್ಯ ಕ್ರಮ ಕೈಗೊಂಡು, ವಿವಿ ವೆಬ್ಸೈಟ್ನಲ್ಲಿ ಪ್ರಕಟಿಸಬೇಕು ಎಂಬ ಬೇಡಿಕೆಗಳ ಈಡೇರಿಕೆ ಕುರಿತು ಈ ಸಂದರ್ಭ ಮನವಿ ಸಲ್ಲಿಸಲಾಯಿತು.
ಮನವಿ ಸ್ವೀಕರಿಸಿದ ಕುಲಸಚಿವ ಯಶವಂತ ಡೋಂಗ್ರೆ, ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು. ಶಾಂತಾ, ಎಂ.ಎನ್. ಮಂಜುಳ, ಡಾ. ಪ್ರಮೋದ್ ಉಪಸ್ಥಿತರಿದ್ದರು.